ADVERTISEMENT

ನೇತ್ರದಾನಕ್ಕೆ 200 ಮಂದಿ ನೋಂದಣಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 8:51 IST
Last Updated 2 ಡಿಸೆಂಬರ್ 2013, 8:51 IST

ಕುಶಾಲನಗರ: ಪಟ್ಟಣದ ರೋಟರಿ ಸಂಸ್ಥೆ ವತಿಯಿಂದ ರೈತ ಸಹಕಾರ ಭವನದಲ್ಲಿ ಭಾನುವಾರ ನಡೆದ ರೋಟರಿ ಹತ್ತು ವಲಯ ಸಮಿತಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಂದರ್ಭ 200 ರೋಟರಿ ಸದಸ್ಯರು ನೇತ್ರದಾನಕ್ಕೆ ಹೆಸರು ನೋಂದಾಯಿತಿಸಿಕೊಂಡರು.

ಇದಕ್ಕೂ ಮೊದಲು ನಡೆದ ವೇದಿಕೆ ಕಾರ್ಯಕ್ರವನ್ನು ವಲಯ ಆರರ ರೋಟರಿ ಸಂಸ್ಥೆ ಗವರ್ನರ್ ರವೀಂದ್ರ ರೈ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ರಾಜ್ಯದಾದ್ಯಂತ ಹತ್ತು ರೋಟರಿ ವಲಯ ಸಂಸ್ಥೆಗಳಿದ್ದು, ಅವುಗಳು ಆಯಾ ವಲಯಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತವೆ. ಆದರೆ ಒಂದು ವಲಯದ ರೋಟರಿ ಕುಟುಂಬಗಳೊಂದಿಗೆ ಮತ್ತೊಂದು ವಲಯಗಳ ಕುಟುಂಬ ಸದಸ್ಯರ ಪರಿಚಯವೇ ಆಗುವುದಿಲ್ಲ.

ಅಂತಹ ಅವಕಾಶಗಳಿಂದನು ವಂಚಿತರಾಗಬಾರದೆಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಬೆಂಗಳೂರಿನ ನಯನ ಜ್ಯೋತಿ ಟ್ರಸ್ಟ್‌ನ ಪ್ರಮುಖ ಎಸ್. ಜಯರಾಮ್ ನೇತ್ರದಾನದ ಮಹತ್ವ ಕುರಿತು ರೋಟರಿ ಸದಸ್ಯರಿಗೆ ಮಾಹಿತಿ ನೀಡಿದರು. ರೋಟರಿಯ 200 ಸದಸ್ಯರು ನೇತ್ರದಾನಕ್ಕೆ ಹೆಸರು ನೋಂದಾಯಿಸಿದರು. ನಂತರ ವಿವಿಧ ಸಾಂಸ್ಕೃತಿಕ ಮತ್ತು ಆಟೋಟ ಸ್ಪರ್ಧೆಗಳು ನಡೆದವು.

ಅಧ್ಯಕ್ಷತೆಯನ್ನು ಕುಶಾಲನಗರ ರೋಟರಿ ಅಧ್ಯಕ್ಷ ಶಾಜಿ ಕೆ. ಜಾರ್ಜ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ರೋಟರಿ ವಲಯ 4 ರ ಸಹಾಯಕ ಗವರ್ನರ್ ಡಾ. ಅರವಿಂದ ಭಟ್‌, ವಲಯ 1ರ ಸಹಾಯಕ ಗವರ್ನರ್ ಕೆ.ಟಿ.ಎಂ. ಭಟ್‌, ಡಾ.ಮಧುಕರ್ ಇದ್ದರು. ಕಾರ್ಯದರ್ಶಿ ಜವಹಾರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.