ADVERTISEMENT

ನ.24 ರಂದು ಕೊಡವ ನ್ಯಾಷನಲ್ ಡೇ-ನಾಚಪ್ಪ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 8:50 IST
Last Updated 17 ಅಕ್ಟೋಬರ್ 2012, 8:50 IST

ಮಡಿಕೇರಿ: ಕೊಡವ ಲ್ಯಾಂಡ್ ಹಕ್ಕೊತ್ತಾಯ ಹೋರಾಟದ 22ನೇ ವರ್ಷದ ಅಂಗವಾಗಿ ನವೆಂಬರ್ 24 ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ `ಕೊಡವ ನ್ಯಾಷನಲ್ ಡೇ~ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವರ 45 ಪ್ರಾಚೀನ ನಾಡುಗಳನ್ನು ಗೂರ್ಖಾಲ್ಯಾಂಡ್ ಮಾದರಿಯಲ್ಲೇ ಕೊಡವ ಲ್ಯಾಂಡ್ ಎಂದು ಘೋಷಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈ ಡೇರಿಸುವಂತೆ ಒತ್ತಾಯಿಸಿ ಕಳೆದ 21 ವರ್ಷಗಳಿಂದ ಇಎನ್‌ಸಿ ಹೋರಾಟ ನಡೆಸುತ್ತಿರುವುದಾಗಿ ಅವರು ತಿಳಿಸಿದರು.

ಕೊಡವ ಲ್ಯಾಂಡ್ ಸ್ವಾಯತ್ತತೆ ನೀಡುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಬೇಕೆಂದು ಒತ್ತಾಯಿಸಿ ನವೆಂಬರ್ 1 ರಂದು ನವದೆಹಲಿ ಚಲೋ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.

ಕೊಡಗಿನ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಅಸ್ಸಾಂ- ಬಂಗಾಳಿ ವಲಸಿಗರ ಇರುವಿಕೆಯನ್ನು ತೋಟದ ಮಾಲೀಕರು ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಮಾಹಿತಿ ನೀಡಬೇಕೆಂದರು.ಈ ಕಾರ್ಮಿಕರನ್ನು ಅತಿಥಿ ಕಾರ್ಮಿಕರೆಂದು ಪರಿಗಣಿಸಿ ಕೆಲಸ ನೀಡಬೇಕು. ಆದರೆ ಮತದಾನದ ಹಕ್ಕು ನೀಡಬಾರದು ಎಂದರು.

ಜ್ಲ್ಲಿಲೆಯ ಕೊಂಗಣ ಪೊಳೆ ಯೋಜನೆಯನ್ನು ಆರಂಭಿಸುವುದನ್ನು ವಿರೋಧಿಸಿ ಸಿಎನ್‌ಸಿ ವತಿಯಿಂದ ಅ.22 ರಂದು ಬೆಳಿಗ್ಗೆ 10 ಗಂಟೆಗೆ ಪೊನ್ನಂಪೇಟೆಯ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಗುವುದು ಎಂದರು.

ಕೊಡವರಿಗೆ ಕೋವಿ ವಿನಾಯಿತಿ ಹಕ್ಕು ಅಬಾಧಿತವಾಗಿ ಮುಂದುವರಿಯುವ ಕುರಿತು ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅ.29 ರಂದು ಗೋಣಿಕೊಪ್ಪಲಿನಲ್ಲಿ, ನವೆಂಬರ್ 6 ರಂದು ಚೇರಂಬಾಣೆಯಲ್ಲಿ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಲಿಯಂಡ ಪ್ರಕಾಶ್, ಪುಲ್ಲೇರ ಕಾಳಪ್ಪ, ಮನವಟ್ಟಿರ ಜಗದೀಶ್, ಚಿಯಕಪುವಂಡ ಮನು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.