ಸೋಮವಾರಪೇಟೆ: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಜಿಲ್ಲಾಮಟ್ಟದ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅತಿಥೇಯ ಡಾಲ್ಫಿನ್ಸ್ ತಂಡ ಹಾಗೂ ಕೂಡಿಗೆಯ ಕ್ರೀಡಾಶಾಲೆ ತಂಡಗಳ ನಡುವಿನ ಪಂದ್ಯವನ್ನು ಭಾರಿ ಮಳೆಯ ಕಾರಣ ಸ್ಥಗಿತಗೊಳಿಸಿ ಜಂಟಿ ವಿಜೇತರೆಂದು ಘೋಷಣೆ ಮಾಡಲಾಯಿತು.
ಮೊದಲಾರ್ಧ ಪಂದ್ಯದಲ್ಲಿ ಡಾಲ್ಫಿನ್ಸ್ ತಂಡ ಮೂರು ಗೋಲುಗಳನ್ನು ದಾಖಲಿಸಿತು. ತಂಡದ ಮುನ್ನೆಡೆ ಆಟಗಾರ ಆಭರಣ್ ಪ್ರಥಮವಾಗಿ ಗೋಲ್ ದಾಖಲಿಸಿದರು. ನಂತರ ತಂಡಕ್ಕೆ ದೊರೆತ ಪೆನಾಲ್ಟಿ ಸ್ಟ್ರೋಕನ್ನು ಗೋಲಾಗಿ ಪರಿವರ್ತಿಸಲು ಯಶಸ್ವಿಯಾದರು.
ತರುವಾಯ ಕೆಲವೇ ನಿಮಿಷಗಳಲ್ಲಿ ತಂಡದ ಆಟಗಾರ ಕಾಳಿ ಮತ್ತೊಂದು ಗೋಲು ಬಾರಿಸುವ ಮೂಲಕ 3–0 ಮುನ್ನೆಡೆ ಪಡೆಯಿತು. ಆದರೆ, ಮೊದಲಾರ್ಧ ಆಟ ಮುಗಿಯುವ ವೇಳೆಗೆ ಸುರಿದ ಭಾರಿ ಮಳೆಯಿಂದಾಗಿ, ಮೈದಾನದಲ್ಲಿ ನೀರು ನಿಂತ ಕಾರಣ, ಆಟವನ್ನು ಮುಂದುವರೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತೀರ್ಪುಗಾರರು ಇತ್ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಿದರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟದ ಮುನ್ನೆಡೆ ಆಟಗಾರ ಡಾಲ್ಫಿನ್ಸ್ ತಂಡದ ಪೃಥ್ವಿ ಮತ್ತು ಕಾಳಿಮುತ್ತು, ಉತ್ತಮ ರಕ್ಷಣಾ ಆಟಗಾರರಾಗಿ ಕೂಡಿಗೆಯ ನಾಗೇಶ್, ಉತ್ತಮ ಗೋಲ್ಕೀಪರ್ ಕೂಡಿಗೆಯ ಪೃಥ್ವಿ, ಪಂದ್ಯ ಪುರುಷೋತ್ತಮರಾಗಿ ಡಾಲ್ಫಿನ್ಸ್ ಆಭರಣ್ ಮತ್ತು ಸರಣಿ ಶ್ರೇಷ್ಠ ಪಶ್ರಸ್ತಿಯನ್ನು ಕೂಡಿಗೆಯ ಚೇತನ್ ಪಡೆದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಹಾಕಿ ಆಟಗಾರ ಎಸ್.ವಿ. ಸುನೀಲ್ ಪತ್ನಿ ನಿಶಾ ಸುನೀಲ್ ಪ್ರಶಸ್ತಿ ವಿತರಿಸಿದರು. ವೇದಿಕೆಯಲ್ಲಿ ಅಂತರರಾಷ್ಟ್ರೀಯ ಹಾಕಿ ಆಟಗಾರರಾದ ವಿಕಾಸ್ ಶರ್ಮ, ರೋಷನ್ಮಿನ್ಜ್, ನಿತಿನ್ಕುಮಾರ್, ವಿಕ್ರಂ ಕಾಂತ್ ಉಪಸ್ಥಿರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.