ADVERTISEMENT

ಪ್ರಿಪೇಯ್ಡ ಆಟೊ: ಶೀಘ್ರವೇ ಕ್ರಮ

ಟ್ರಾಫಿಕ್ ಪಿಎಸ್‌ಐ ಸಂತೋಷ್ ರಾಮ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2013, 5:47 IST
Last Updated 6 ಆಗಸ್ಟ್ 2013, 5:47 IST

ಮಡಿಕೇರಿ: ಆರ್‌ಟಿಒ ಅಧಿಕಾರಿಗಳೊಂದಿಗೆ ಚರ್ಚಿಸಿ, ನಗರದಲ್ಲಿಯೂ ಕೂಡ ಪ್ರಿಪೇಯ್ಡ ಆಟೊ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಸಂತೋಷ್ ರಾಮ್ ಹೇಳಿದರು.

ನಗರ ಪೊಲೀಸ್ ಠಾಣೆಯಲ್ಲಿ ಆಟೊ ಚಾಲಕರ ಕುಂದು ಕೊರತೆ ಕುರಿತಂತೆ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.  ಈ ಕುರಿತು ಆರ್‌ಟಿಓ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿದ್ದು, ಅವರು ಅನುಮತಿ ನೀಡಿದ ಬಳಿಕ ಈ ವ್ಯವಸ್ಥೆ ಕಲ್ಪಿಸಲು ಸಾಧ್ಯ. ಆರ್‌ಟಿಓ ಅಧಿಕಾರಿಗಳೊಂದಿಗೆ ಚರ್ಚಿಸಿ ಆಟೊ ಬಾಡಿಗೆ ದರದ ಬಗ್ಗೆ ಸೂಕ್ತ ಮಾಹಿತಿಯನ್ನು ಪ್ರಕಟಿಸುವಂತೆ ಅವರು ತಿಳಿಸಿದರು.

ಸಂಚಾರ ವ್ಯವಸ್ಥೆಯನ್ನು ಸುಗಮವಾಗಿಸುವ ಉದ್ದೇಶದಿಂದ ನಗರದ ಹಲವು ಭಾಗಗಳಲ್ಲಿ ಶೀಘ್ರವೇ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ  ವಾಹನ ಸವಾರರ ಮನೆಗೆ ನೋಟಿಸ್ ಬರಲಿದೆ ಎಂದರು.

ವೃತ್ತ ನಿರೀಕ್ಷಕ ಪ್ರಕಾಶಗೌಡ ಮಾತನಾಡಿ, ಆಟೊ ಚಾಲಕರ ಬಗ್ಗೆ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ದೂರುಗಳು ಕೇಳಿ ಬರುತ್ತಿದ್ದು, ವಾಹನ ಚಾಲನೆ ಮಾಡುವಾಗ ಕಾನೂನಿನನ್ವಯ ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳುವಂತೆ ಸೂಚಿಸಿದರು.

ಎಸ್.ಐ. ಚೆನ್ನೆಗೌಡ ಮಾತನಾಡಿ, ಮಡಿಕೇರಿಯಲ್ಲಿನ ಹಲವು ಆಟೊ ಚಾಲಕರು ಪ್ರವಾಸಿಗರಿಗೆ ಅನ್ಯ ವಿಷಯಕ್ಕೆ ಸಂಬಂಧಿಸಿದಂತೆ ಅಸಭ್ಯವಾಗಿ ವರ್ತಿಸುತ್ತಿದ್ದು, ಅನಗತ್ಯ ವಿಷಯದಲ್ಲಿ ಭಾಗಿಯಾಗಿರುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿದ್ದು, ಈ ಬಗ್ಗೆ ಆಟೊ ಚಾಲಕರು ಎಚ್ಚರ ವಹಿಸಬೇಕೆಂದು ಸೂಚಿಸಿದರು.

ಪೊಲೀಸ್ ಇಲಾಖಾ ಸಿಬ್ಬಂದಿ ಉದಯ ಕುಮಾರ್ ಮಾತನಾಡಿ, ಪೊಲೀಸ್ ಸಿಬ್ಬಂದಿಗೆ ತುರ್ತು ಕಾರ್ಯದ ನಿಮಿತ್ತ ಆಟೊ ಹತ್ತಿದರೆ ಆಟೊದವರು ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಆಟೊ ಚಾಲಕರ ಮಾಲೀಕರ ಸಂಘದ ಅಧ್ಯಕ್ಷ ಮೇದಪ್ಪ ಮಾತನಾಡಿ, ಆಟೊ ಚಾಲಕರು ತಪ್ಪು ಮಾಡಿದ ಸಂದರ್ಭ ನಾವೇ ಪೊಲೀಸ್ ಠಾಣೆಗೆ ಒಪ್ಪಿಸಿರುವ ಪ್ರಕರಣಗಳಿವೆ. ಮುಂದೆಯೂ ಕೂಡ ಸಾರ್ವಜನಿಕರ ಹಿತ ದೃಷ್ಟಿಯಿಂಲೇ ಆಟೊ ಓಡಿಸುವುದಾಗಿ ತಿಳಿಸಿದರು.

ಕಳೆದ ಮೂರು ವರ್ಷದಿಂದ ಆರ್‌ಟಿಒ ಅಧಿಕಾರಿಗಳ ಆಟೊ ಚಾಲಕರ ಸಭೆ ಕರೆದಿಲ್ಲ. ಈ ಹಿನ್ನೆಲೆಯಲ್ಲಿ ಬಾಡಿಗೆಯ ವಿಷಯದ ಬಗ್ಗೆ ಸೂಕ್ತ ರೀತಿಯಲ್ಲಿ ಪ್ರಕಟಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.