ADVERTISEMENT

ಬೇಸಿಗೆ ಶಿಬಿರದಿಂದ ಮಾನಸಿಕ ಬೆಳವಣಿಗೆ ಸಾಧ್ಯ

​ಪ್ರಜಾವಾಣಿ ವಾರ್ತೆ
Published 31 ಮೇ 2012, 4:00 IST
Last Updated 31 ಮೇ 2012, 4:00 IST

ಮಡಿಕೇರಿ: ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಚಿಣ್ಣರ ಮೇಳದಂಥ ಬೇಸಿಗೆ ಶಿಬಿರಗಳು ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸಮಿತಿ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ಮಕ್ಕಳಿಗಾಗಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಬಿರಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ಶಾಲೆಯಲ್ಲಿಯ ಕಲಿಕೆ ಮತ್ತು ಚಿಣ್ಣರ ಮೇಳದಲ್ಲಿಯ ಚಟುವಟಿಕೆಗಳ ಅನಾವರಣಕ್ಕೆ ಸಹಕಾರಿಯಾಗಲಿದೆ ಎಂದರು.

ಹಿರಿಯ ಉಪವಿಭಾಗಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಚಿಣ್ಣರ ಮೇಳದಂತಹ ಕಾರ್ಯಕ್ರಮಗಳು ಜರುಗಬೇಕು.

ಇದರಿಂದ ಮಕ್ಕಳಲ್ಲಿ ಶಿಸ್ತು, ಶ್ರದ್ಧೆ, ಕ್ರೀಯಾಶೀಲತೆ ದ್ವಿಗುಣಗೊಳ್ಳುವುದು ಎಂದರು.
ಪರ್ತಕರ್ತ ಬಿ.ಜಿ.ಅನಂತಶಯನ ಮಾತನಾಡಿ, ಮಕ್ಕಳು ಹೊಸತನ ಬೆಳೆಸಿಕೊಳ್ಳಬೇಕು. ಇದರಿಂದ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು. ಮಕ್ಕಳಲ್ಲಿಯ ಆಸಕ್ತಿ, ಕುತೂಹಲ ಮತ್ತು ಉತ್ಸಾಹಕ್ಕೆ ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಅವರು ಹೇಳಿದರು.

ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಬೋಧಸ್ವರೂಪಾನಂದ ಸ್ವಾಮೀಜಿ, ಸುಂಟಿಕೊಪ್ಪ ಸ್ವಸ್ಥ ಯೋಜನಾಧಿಕಾರಿ ಗಂಗಾ ಚೆಂಗಪ್ಪ ಮಾತನಾಡಿದರು.

ಉದ್ಯಮಿ ಕೇಶವ ಭಟ್ ಮುಳಿಯ, ಸೌರಭ ಕಲಾ ಪರಿಷತ್ ನಿರ್ದೇಶಕ ಡಾ.ಎಂ.ಆರ್.ಶ್ರಿವಿದ್ಯಾ ಮುರಳೀಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಿಜಯಲಕ್ಷ್ಮಿ ಶೆಣೈ ಮತ್ತಿತರರು ಇದ್ದರು.

ಕೃಷ್ಣವೇಣಿ ಪ್ರಸಾದ್ ಪ್ರಾರ್ಥನೆ ಹಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಾರದಾ ರಾಮನ್ ಮತ್ತು ಸೌರಭ ನೃತ್ಯ ಕಲಾ ಪರಿಷತ್ತಿನ ವಿದುಷಿ ಶ್ರಿಧನ್ಯಾ ರಾಮನ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.