ADVERTISEMENT

‘ಮಧ್ಯವರ್ತಿ ಹಾವಳಿ ತಡೆಗೆ ಕ್ರಮ’

ಎಸಿಬಿ ದೂರು ಸ್ವೀಕಾರ ಸಭೆಯಲ್ಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 9:07 IST
Last Updated 17 ಏಪ್ರಿಲ್ 2018, 9:07 IST

ಸೋಮವಾರಪೇಟೆ: ಸರ್ಕಾರಿ ನೌಕರರು ಲಂಚ ಪಡೆಯುವುದು ಮತ್ತು ಅಕ್ರಮ ಆಸ್ತಿ ಗಳಿಕೆಯ ಬಗ್ಗೆ ಯಾರಿಗಾದರೂ ಸೂಕ್ತ ಮಾಹಿತಿ ಇದ್ದಲ್ಲಿ, ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದಲ್ಲಿ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸಿಬಿ ಡಿವೈಎಸ್ಪಿ ಎಚ್.ಎಂ. ಶೈಲೇಂದ್ರ ಹೇಳಿದರು.

ಇಲ್ಲಿನ ಪ್ರತಿಕಾಭವನದಲ್ಲಿ ಎಸಿಬಿ ವತಿಯಿಂದ ಸೋಮವಾರ ನಡೆದ ಸಾರ್ವಜನಿಕರಿಂದ ದೂರು ಸ್ವೀಕಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸರ್ಕಾರಿ ನೌಕರ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ಅನಗತ್ಯ ವಿಳಂಬ ಮಾಡಿದ್ದಲ್ಲಿ ಅಥವಾ ನಿರ್ಲಕ್ಷ್ಯ ತೋರಿದಲ್ಲಿ, ಸಾರ್ವಜನಿಕರು ಎಸಿಬಿಗೆ ದೂರು ಸಲ್ಲಿಸಬಹುದು ಎಂದು ಹೇಳಿದರು.

ADVERTISEMENT

ಅಧಿಕಾರಿಗಳು ಹಾಗೂ ನೌಕರರು ಹಣದೊಂದಿಗೆ ಕರ್ತವ್ಯಕ್ಕೆ ಹಾಜರಾಗಬಾರದು. ಹಣವಿದ್ದರೆ ಮುಂಚಿತವಾಗಿಯೇ ಕಾರಣ ಕೊಟ್ಟು ಡೈರಿಯಲ್ಲಿ ನಮೂದಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ನೌಕರರು ಅಧಿಕಾರಿಗಳ ಹೆಸರು ಹೇಳಿ ಲಂಚ ಪಡೆದಿರುವುದು ಸಾಬೀತಾ ದರೆ, ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದರು.

ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿ ಗಳ ಹಾವಳಿ ಬಗ್ಗೆ ಹೆಚ್ಚು ದೂರುಗಳು ಬಂದಿದ್ದು, ಇದು ಭ್ರಷ್ಟಾಚಾರ ಹೆಚ್ಚಾಗಲು ಕಾರಣವಾಗಿದೆ. ಮೇಲಧಿ ಕಾರಿಗಳು ಮಧ್ಯವರ್ತಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕು. ಹೀಗೆ ಮುಂದುವರಿದರೆ ಅಧಿಕಾರಿಗಳು ಜವಾಬ್ದಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಸಭೆಯಲ್ಲಿ ತಹಶೀಲ್ದಾರ್ ವೀರೇಂದ್ರ ಬಾಡಕರ್, ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಸಿ.ಚಿಟ್ಟಿಯಪ್ಪ, ಇನ್‌ ಸ್ಪೆಕ್ಟರ್‌ಗಳಾದ ಎಂ.ಮಹೇಶ್, ಎಂ.ದೊಡ್ಡೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.