ADVERTISEMENT

ಮೈನವಿರೇಳಿಸಿದ ಎತ್ತಿನಗಾಡಿ ಓಟ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 9:02 IST
Last Updated 7 ಡಿಸೆಂಬರ್ 2013, 9:02 IST

ಕುಶಾಲನಗರ: ಸಮೀಪದ ಹೆಬ್ಬಾಲೆ ಗ್ರಾಮ ದೇವತೆ ಬನಶಂಕರಿ ಅಮ್ಮನವರ ವಾರ್ಷಿಕ ಹಬ್ಬದ ಅಂಗವಾಗಿ  ಗ್ರಾಮದ ಶನಿವಾರಸಂತೆ ರಸ್ತೆಯಲ್ಲಿ ಬುಧವಾರ ನಡೆದ ಎತ್ತಿನಗಾಡಿ ಓಟದ ಸ್ಪರ್ಧೆಯು ನೆರೆದಿದ್ದ ಸಾವಿರಾರು ನೋಡುಗರ ಮೈನವಿರೇಳಿಸಿತು.

ಮಾದರಿ ಯುವಕ ಸಂಘವು  ಬಾಣವಾರ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ 9ಕ್ಕೆ ಆಯೋಜಿಸಿದ್ದ ಗ್ರಾಮೀಣ ಕ್ರೀಡೆ ಎತ್ತಿನ ಗಾಡಿ ಓಟದ ಸ್ಪರ್ಧೆಯು ನೋಡುಗರನ್ನು ಆಶ್ಚರ್ಯ ಚಕಿತರನ್ನಾಗಿಸಿತು. ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಎತ್ತಿನ ಗಾಡಿ ಓಟಕ್ಕೆ ಹಸಿರು ನಿಶಾನೆ ತೋರಿಸುತ್ತಿದ್ದಂತೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹತ್ತಾರು ಎತ್ತಿನ ಗಾಡಿ ಸ್ಪರ್ಧಿಗಳು ತಾ ಮುಂದು, ನಾ ಮುಂದು ಎಂದು ಎತ್ತುಗಳನ್ನು ಅಬ್ಬರಿಸುತ್ತ ಗಾಡಿಯನ್ನು ಮುನ್ನುಗ್ಗಿಸುತ್ತಿದ್ದ ಕ್ಷಣಗಳು ರೋಚಕವಾಗಿದ್ದವು.

ಕುಶಾಲನಗರ, ಶಿರಂಗಾಲ, ತೊರೆನೂರು, ಮಣಜೂರು, ಕೂಡಿಗೆ ಸೇರಿದಂತೆ ಹೊರ ಜಿಲ್ಲೆಯಿಂದಲೂ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನಿಂತಿದ್ದರಲ್ಲದೇ ಮನೆಗಳ, ಮರಗಳ ಏರಿ ಕಾತರದಿಂದ ನೋಡುತ್ತಿದ್ದ ದೃಶ್ಯ ಕಂಡು ಬಂತು.

ನಂತರ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬೆಳಿಗ್ಗೆ 11ಕ್ಕೆ ಸರಿಯಾಗಿ ಎತ್ತಿನ ಗಾಡಿಯ ಚಕ್ರವನ್ನು ಕಟ್ಟಿ ಓಡಿಸುವ ಸ್ಪರ್ಧೆಯೂ ನಡೆಯಿತು. ಸಂಜೆ 6ಕ್ಕೆ ನಡೆದ ಸಮಾರೋಪ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ  ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.