ನಾಪೋಕ್ಲು: ಕಾಫಿಯನ್ನು ರಾಷ್ಟ್ರೀಯ ಪಾನಿಯ ಎಂದು ಘೋಷಿಸುವ ಆಂದೋಲನದ ಪ್ರಯುಕ್ತ ನಾಪೋಕ್ಲುವಿನಲ್ಲಿ ಸೋಮವಾರ ಸಭೆ ನಡೆಯಿತು.
ಕೊಡವ ಸಮಾಜದಲ್ಲಿ ಸೋಮವಾರ ನಡೆದ ನಾಪೋಕ್ಲು ನಾಡು ಕಾಫಿ ಬೆಳೆಗಾರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆಯನ್ನು ಕಾಫಿ ರಾಷ್ಟ್ರೀಯ ಪಾನೀಯ ಹೋರಾಟ ಸಮಿತಿ ಅಧ್ಯಕ್ಷ ಮಾಜಿಮಾಡ ರವೀಂದ್ರ ವಹಿಸಿದ್ದರು.
ನಂತರ ಮಾತನಾಡಿ, ರಾಜ್ಯ ಸರ್ಕಾರದಿಂದ ಕಾಫಿಯನ್ನು ರಾಷ್ಟ್ರೀಯ ಪಾನೀಯವನ್ನಾಗಿಸುವ ಬಗ್ಗೆ ಸ್ಪಂದನೆ ದೊರೆತಿದ್ದು, ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸುವ ಭರವಸೆ ನೀಡಿದ್ದಾರೆ. ಕೊಡಗಿನಲ್ಲಿ ಮೊದಲ ಬಾರಿಗೆ ಎಲ್ಲಾ ಕಾಫಿ ಬೆಳೆಗಾರರನ್ನು ಒಗ್ಗೂಡಿಸಿ ಈ ಆಂದೋಲನ ಹಮ್ಮಿಕೊಳ್ಳ ಲಾಗಿದೆ.
ಈ ಹೋರಾಟಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕಾಫಿ ಬೆಳೆಗಾರರ ಸಂಘ ಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಸಮಿತಿ ಸದಸ್ಯ ಕೋಡಿ ಪೊನ್ನಪ್ಪ, ಕಾಫಿಯನ್ನು ರಾಷ್ಟ್ರೀಯ ಪಾನೀಯ ಎಂದು ಘೋಷಿಸುವ ಅಗತ್ಯವಿದೆ. ಕಾಳು ಮೆಣಸು ಕೊಡಗಿನ ಪ್ರಮುಖ ಸಂಬಾರ ಬೆಳೆಯಾಗಿದ್ದರೂ ಸಹ ಸಂಬಾರ ಮಂಡಳಿಯಿಂದ ಹೆಚ್ಚಿನ ನೆರವು ಲಭಿಸುತ್ತಿಲ್ಲ. ನೆರೆಯ ಕೇರಳ ರಾಜ್ಯದಲ್ಲಿ ನೀಡುವ ಸವಲತ್ತನ್ನು ಕೊಡಗು ಜಿಲ್ಲೆಯ ಬೆಳೆಗಾರರಿಗೂ ನೀಡಬೇಕು ಎಂದು ತಿಳಿಸಿದರು.
ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಮಾತನಾಡಿ, ಕಾಫಿ ಬೆಳೆಗಾರರು ಒಗ್ಗೂಡಬೇಕಾದ ಅನಿವಾರ್ಯತೆ ಇದೆ. ಕೊಡಗು ಜಿಲ್ಲೆಯ ಪ್ರತಿಮನೆಯಿಂದಲೂ ಕಾಫಿ ಕುಡಿಯುವ ಆಂದೋಲನ ಆಗಬೇಕಾಗಿದೆ ಎಂದರು.
ವೇದಿಕೆಯಲ್ಲಿ ನಾಲ್ಕುನಾಡು ರೈತ ಸಂಘದ ಅಧ್ಯಕ್ಷ ಡಾ. ಬೊಪ್ಪಂಡ ಜಾಲಿ ಬೋಪಯ್ಯ ಉಪಸ್ಥಿತರಿದ್ದರು. ಕಾಫಿ ಬೆಳೆಗಾರ ಎನ್.ಎಸ್. ಉದಯಶಂಕರ್ ಸ್ವಾಗತಿಸಿದರು. ಕುಂಡ್ಯೋ ಳಂಡ ರಮೇಶ್ ಮುದ್ದಯ್ಯ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.