ADVERTISEMENT

ಶಿಕ್ಷಕ, ಪೋಷಕರ ನಡುವೆ ಹೊಂದಾಣಿಕೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 3 ಜನವರಿ 2011, 11:35 IST
Last Updated 3 ಜನವರಿ 2011, 11:35 IST

ನಾಪೋಕ್ಲು: ಶಿಕ್ಷಕ ಪೋಷಕರ ನಡುವೆ ಉತ್ತಮ ಹೊಂದಾಣಿಕೆ ಹಾಗೂ ಸಂಬಂಧವಿದ್ದರೆ ಮಕ್ಕಳ ವಿದ್ಯಾಭ್ಯಾಸ ಉಜ್ವಲವಾಗಲು ಸಾಧ್ಯ ಎಂದು ಭಾಗಮಂಡಲ ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ಕೆ. ಪೊನ್ನಪ್ಪ ಅಭಿಪ್ರಾಯಪಟ್ಟರು.  ಸಮೀಪದ ಮೂರ್ನಾಡಿನ ಕೊಡಂಬೂರು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
 
ವಿದ್ಯಾಸಂಸ್ಥೆ ಎಂಬುದು ಪವಿತ್ರವಾದ ದೇಗುಲವಾಗಿದ್ದು ನಿಸ್ವಾರ್ಥ ಸೇವೆಯನ್ನು ನೀಡುವ ಸ್ಥಳವಾಗಿದೆ. ಇಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಇದ್ದು, ಮಕ್ಕಳ ಭವಿಷ್ಯ ಉಜ್ವಲವಾಗಲು ಮೊದಲ ಹೆಜ್ಜೆಯಾಗಿದೆ. ಪೋಷಕರು ಶಿಕ್ಷಕರೊಂದಿಗೆ ಕೈಜೋಡಿಸಿ ತಮ್ಮ ಮಕ್ಕಳ ವಿದ್ಯಾಭ್ಯಾಸದೆಡೆಗೆ ಗಮನಹರಿಸಬೇಕೆಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್. ನವೀನ್ ಕಾರ್ಯಪ್ಪ ಮಾತನಾಡಿ, ಪ್ರತಿಯೊಬ್ಬರಿಗೂ ಜೀವನದಲ್ಲಿ ಶಿಕ್ಷಣ ಅತ್ಯಗತ್ಯವಾಗಿದ್ದು, ಶಿಕ್ಷಣದಿಂದ ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯವಾಗುತ್ತದೆ. ಶಿಕ್ಷಣದಿಂದ ಜ್ಞಾನ ಸಂಪಾದನೆಯು ಸಾಧ್ಯ ಎಂದರು. ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಮುಕ್ಕಾಟೀರ ರವಿಚೀಯಣ್ಣ, ಕಾರ್ಯದರ್ಶಿ ಡಾ. ಕುಂಞಅಬ್ದುಲ್ಲ, ಖಚಾಂಚಿ ಬಡುವಂಡ ಬೆಲ್ಲು ಚಿಣ್ಣಪ್ಪ, ನಿರ್ದೇಶಕರಾದ ಬಡುವಂಡ ಗಣೇಶ್ ಬೋಪಣ್ಣ, ಬಡುವಂಡ ಎ. ವಿಜಯ, ಅವರೆಮಾದಂಡ ಸುಗುಣ ಸುಬ್ಬಯ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿ ಎಚ್. ಬಿ. ಜಗತ್ ಸ್ವಾಗತಿಸಿ, ಬಿ.ಬಿ. ಜೆಸಿಕಾ ವಂದಿಸಿದರು. ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.