ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಭಾನುವಾರ ಸಂಜೆ ಗುಡುಗು ಸಿಡಿಲಿನೊಂದಿಗೆ ಆಲಿಕಲ್ಲು ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ಥವಾಯಿತು.
ಸಂಜೆ 5ಗಂಟೆಯ ನಂತರ ಪ್ರಾರಭವಾದ ಮಳೆ ಸುಮಾರು ಒಂದೂವರೆ ಗಂಟೆಯವರೆಗೆ ಬಿಡದೇ ಸುರಿಯಿತು. ಕಳೆದ ಹಲವು ದಿನಗಳಿಂದ ಬಿಸಿಲಿನ ಬೆಗೆಯಲ್ಲಿ ಬೇಸತ್ತಿದ್ದ ಜನರಿಗೆ ಮಳೆ ತಂಪು ನೀಡಿತು. ಇಲ್ಲಿನ ಸರ್ಕಾರಿ ಪ್ರಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಜಿಲ್ಲಾಮಟ್ಟದ ಹಾಕಿ ಟೂರ್ನಿ ಮಳೆಯಿಂದ ಸ್ಥಗಿತಗೊಂಡಿತು.
ಮೈದಾನದಲ್ಲಿ ಅಳವಡಿಸಿದ್ದ ಶಾಮಿಯಾನ ಭಾರಿ ಮಳೆ ಗಾಳಿಗೆ ಕಿತ್ತು ಹೋಗಿ ಸಂಘಟಕರು ಪರದಾಡಿದರು. ಟೂರ್ನಿ ವೀಕ್ಷಣೆಗೆ ಬಂದಿದ್ದ ಜನ ಮಳೆಯಲ್ಲಿ ತೊಯ್ದರು. ನಂತರ ಸಮಾರೋಪ ಸಮಾರಂಭವನ್ನು ಚನ್ನಬಸಪ್ಪ ಸಭಾಂಗಣಕ್ಕೆ ಸ್ಥಳಾಂತರಿಸಿ ಬಹುಮಾನ ವಿತರಿಸಲಾಯಿತು. ಕಳೆದ ಕೆಲವು ದಿನಗಳಿಂದ ಮೋಡ ಕವಿದು, ತುಂತುರು ಮಳೆಯಾಗುತ್ತಿತ್ತು. ಆದರೆ, ಭಾನುವಾರ ಸುರಿದ ಮಳೆಯಿಂದ ಕೃಷಿಕರು ಖುಷಿಗೊಂಡಿದ್ದಾರೆ. ಪಟ್ಟಣ ಸೇರಿದಂತೆ ಹಾನಗಲ್ಲು ಗ್ರಾಮ, ಶಾಂತಳ್ಳಿ ಹೋಬಳಿಯ ಕೆಲವೆಡೆ ಹಾಗೂ ಬಿಟಿಕಟ್ಟೆ, ಕಾಗಡಿಕಟ್ಟೆಯಲ್ಲಿ ಉತ್ತಮ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.