ADVERTISEMENT

ಸೋಮವಾರಪೇಟೆ: ಕೃಷಿ ಚಟುವಟಿಕೆ ಚುರುಕು

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 9:12 IST
Last Updated 5 ಜುಲೈ 2013, 9:12 IST

ಸೋಮವಾರಪೇಟೆ: ಕಳೆದ 12 ವರ್ಷಗಳ ನಂತರ ಉತ್ತಮ ಮುಂಗಾರು ಆಗಿದ್ದು, ತಾಲ್ಲೂಕಿನಾ ದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

ಜೂನ್ ಮೊದಲ ವಾರದಿಂದಲೇ ಮುಂಗಾರು ಆರಂಭವಾದ ಹಿನ್ನೆಲೆ ಯಲ್ಲಿ ಕೃಷಿ ಚಟುವಟಿಕೆಗಳು ಬಿರುಸು ಗೊಂಡಿವೆ. ಹಲವು ರೈತರು ಈಗಾಗಲೇ ಭತ್ತ ನಾಟಿ ಮಾಡಿದ್ದರೆ, ಇನ್ನು ಕೆಲವರು ಭೂಮಿ ಹದಗೊಳಿಸುವಲ್ಲಿ ತಲ್ಲಿನ ರಾಗಿದ್ದಾರೆ.

ಹಲವು ವರ್ಷಗಳ ನಂತರ ಜೂನ್‌ನಲ್ಲಿ ಉತ್ತಮ ಮುಂಗಾರು ಆಗಿದೆ. ಇದು ಭತ್ತದ ಕೃಷಿಗೆ ಉತ್ತಮವಾಗಿ ಎನ್ನುತ್ತಾರೆ ನಾಟಿ ಕೆಲಸದಲ್ಲಿ ತೊಡಗಿದ್ದ ಹಿರಿಕರ ಗ್ರಾಮದ ರೈತರ ಎಚ್. ಎ. ಕೃಷ್ಣಪ್ಪ.

ತಾಲ್ಲೂಕಿನಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ಶಾಂತಳ್ಳಿ ಹೋಬಳಿಯಲ್ಲಿ ಜನವರಿಯಿಂದ ಇಲ್ಲಿವರೆಗೆ 72 ಇಂಚು ಮಳೆ ಸುರಿದಿದೆ.

ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ಭತ್ತದ ಕೃಷಿ ಕೈಗೊಳ್ಳಲು ವಿಳಂಬವಾಗಿದೆ ಎಂದು ಜಕ್ಕನಳ್ಳಿಯ ಚಂದ್ರಶೇಖರ್ ಹೇಳುತ್ತಾರೆ.

ಗುರುವಾರ ಬೆಳಿಗ್ಗೆವರೆಗೂ ಸುರಿದ ಮಳೆ ನಂತರ ಬಿಡುವು ನೀಡಿತು. ಬುಧವಾರ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸ ಲಾಗಿತ್ತು.

ಬಿತ್ತನೆ ಬೀಜ ವಿತರಣೆ
ಸೋಮವಾರಪೇಟೆ:
ಜೂನ್ ತಿಂಗಳಲ್ಲಿನ ಉತ್ತಮ ಮುಂಗಾರು ಆರಂಭ ಕೃಷಿಗೆ ಪೂರಕವಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಜಶೇಖರ್ ಹೇಳಿದರು.

ಈಗಾಗಲೆ ರೈತರು ಸಬ್ಸಿಡಿ ದರದ ಬಿತ್ತನೆ ಬೀಜಗಳನ್ನು ಪಡೆದು ಕೊಳ್ಳುತ್ತಿದ್ದಾರೆ.

ತುಂಗ, ತನು, ಬಾಂಗ್ಲಾ ರೈಸ್, ಟಿಆರ್ 64, ಎಂಟಿಯು 1001, ಹೈಬ್ರಿಡ್ ಭತ್ತದ ತಳಿಗಳು, ವಿವಿಧ ಜಾತಿಯ ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ಸಹಕಾರ ಸಂಘಗಳ ಮೂಲಕ ವಿತರಿಸಲಾಗಿದೆ. ಭತ್ತದ ಬೆಳೆಗೆ ತಗಲುವ ಕೀಟದ ಹತೋಟಿಗೆ ಶೇ 50 ಸಹಾಯಧನದಲ್ಲಿ ಔಷಧಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ 6 ರೈತ ಸಂಪರ್ಕ ಕೇಂದ್ರಗಳಿದ್ದು, ಒಟ್ಟು 550 ಕ್ವಿಂಟಾಲ್ ಮುಸುಕಿನ ಜೋಳದ ಬೇಡಿಕೆ ಇದೆ. 1,685 ಕ್ವಿಂಟಾಲ್ ಭತ್ತದ ಬೀಜ ಬೇಡಿಕೆ ಇದ್ದು, 1,428 ಕ್ವಿಂಟಾಲ್ ವಿವಿಧ ತಳಿಯ ಬತ್ತದ ಬೀಜ ದಾಸ್ತಾನು ಇದೆ. ಈಗಾಗಲೇ 1,074 ಕ್ವಿಂಟಾಲ್ ರೈತರಿಗೆ ವಿತರಿಸಲಾಗಿದೆ. 250 ಹೆಕ್ಟೆರ್‌ನಲ್ಲಿ ಹೊಗೆಸೊಪ್ಪು ಬೆಳೆಯುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.