ADVERTISEMENT

‘ವಿಕೋಪ ಎದುರಿಸಲು ಅರಿವು ಅಗತ್ಯ’

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 8:12 IST
Last Updated 1 ಜನವರಿ 2014, 8:12 IST

ಮಡಿಕೇರಿ: ದೇಶದಲ್ಲಿ ಭೂಕಂಪ, ಪ್ರವಾಹ ಮತ್ತಿತರ ಪ್ರಾಕೃತಿಕ ವಿಕೋಪಗಳು ಆಗಾಗ ಸಂಭವಿಸುತ್ತಲೇ ಇರುತ್ತದೆ. ಇಂತಹ ವಿಕೋಪಗಳು ಉಂಟಾದಾಗ ಧೈರ್ಯವಾಗಿ ಎದುರಿಸುವ ಬಗ್ಗೆ ಪ್ರತಿಯೊಬ್ಬರಲ್ಲಿ ಜಾಗೃತಿ ಅತ್ಯಗತ್ಯ ಎಂದು  ಫೀಲ್ಡ್‌ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಟಿ.ಡಿ. ತಿಮ್ಮಯ್ಯ ಹೇಳಿದರು.

ವಿಪತ್ತುಗಳನ್ನು ಧೈರ್ಯವಾಗಿ ಎದುರಿಸಲು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಗೃಹ ರಕ್ಷಕ ದಳ ಮತ್ತು ಅಗ್ನಿಶಾಮಕ ಇಲಾಖೆ ವತಿಯಿಂದ ನಗರದ ಗೃಹರಕ್ಷಕದಳ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ವಿಪತ್ತು ಕಡಿತಗೊಳಿಸುವ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ರಾಷ್ಟ್ರದಲ್ಲಿ ವಿಪತ್ತಿನಂತಹ ಅವಘಡಗಳಿಂದ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ವಿಪತ್ತುಗಳು ಉಂಟಾದಾಗ ಆದಷ್ಟು ಆಸ್ತಿ-ಪಾಸ್ತಿ, ಜನ-ಜಾನುವಾರುಗಳ ರಕ್ಷಣೆ ಮಾಡುವತ್ತ ಗಮನ ನೀಡಬೇಕು. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅರಿವು ಇರಬೇಕು ಎಂದರು.

ಲೆ.ಕರ್ನಲ್ ಪಿ.ಎನ್. ಗಣೇಶ್ ಮಾತನಾಡಿ, ಪ್ರವಾಹ, ಭೂಕುಸಿತ, ರಸ್ತೆ ಅಪಘಾತ ಮತ್ತಿತರ ಅವಘಡಗಳು ಯಾವುದೇ ಸಂದರ್ಭದಲ್ಲಿ ಎದುರಾಗಬಹುದು. ಅಂತಹ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಜಾಗೃತಿ ವಹಿಸಬೇಕು ಎಂದರು.
ಹೋಂ ಗಾಡ್ಸರ್್ ಕಮಾಂಡೆಂಟ್ ಮೇಜರ್ ಚಿಂಗಪ್ಪ ಮಾತನಾಡಿ, ಯಾವುದೇ ವಿಕೋಪಗಳು ಉಂಟಾದಾಗ ಗೃಹ ರಕ್ಷಕ, ಅಗ್ನಿಶಾಮಕ ದಳ, ಎನ್.ಸಿ.ಸಿ, ನೆರವಿನೊಂದಿಗೆ ಸಾರ್ವಜನಿಕರು ಸಹ ಕೈಜೋಡಿಸಿದರೆ ವಿಪತ್ತುಗಳನ್ನು ಸ್ವಲ್ಪ ಮಟ್ಟಿಗಾದರೂ ತಗ್ಗಿಸಬಹುದು ಎಂದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಅನುಚೇತ್, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಅಪ್ಪಯ್ಯ, ಜಿ.ಆರ್. ಸದಾಶಿವ ರಾವ್ ಮತ್ತಿತರರು ಮಾತನಾಡಿದರು.

ನಂತರ ಅಗ್ನಿ ಅನಾಹುತ ಹಾಗೂ ದುರಂತಗಳನ್ನು ಹೇಗೆ ಎದುರಿಸಬೇಕು. ಬೆಂಕಿ ನಂದಿಸುವ ಮಾರ್ಗ, ಬೆಂಕಿ ಹತ್ತಿದ ಮನೆ, ಜನ-ಜಾನುವಾರುಗಳ ರಕ್ಷಿಸುವ ವಿಧಾನ ಹಾಗೂ ಗಾಯಾಳುಗಳನ್ನು ಸಾಗಿಸುವ ಸ್ವರೂಪಗಳ ಬಗ್ಗೆ ನೀಡಿದ ಅಗ್ನಿಶಾಮಕ ಸಿಬ್ಬಂದಿಗಳು ಅಣಕು ಪ್ರದರ್ಶನದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಇದಕ್ಕೂ ಮೊದಲು ನಗರದ ಹಾಕಿ ಮೈದಾನದಿಂದ ವಿಪತ್ತು ನಿರ್ವಹಣೆ ಜಾಗೃತಿ ಜಾಥಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಅನುಚೇತ್ ಅವರು ಚಾಲನೆ ನೀಡಿದರು. ಪೊಲೀಸ್ ಗೃಹ ರಕ್ಷಕ ದಳ, ಎನ್.ಸಿ.ಸಿ., ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ್ ಸೇವಾದಳ, ಶಾಲಾ ವಿದ್ಯಾರ್ಥಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.