ADVERTISEMENT

70ನೇ ದಿನಕ್ಕೆ ತಾಲ್ಲೂಕು ರಚನೆ ಹೋರಾಟ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 6:29 IST
Last Updated 10 ಜನವರಿ 2018, 6:29 IST

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕು ರಚನೆಗೆ ಒತ್ತಾಯಿಸಿ ಇಲ್ಲಿ ನಡೆಯುತ್ತಿರುವ ಹೋರಾಟ ಮಂಗಳ ವಾರ 70 ನೇ ದಿನಕ್ಕೆ ಕಾಲಿಟ್ಟಿತು. ತಾಲ್ಲೂಕು ಹೋರಾಟ ಸಮಿತಿ ಸದಸ್ಯರ ಒಂದು ತಂಡ ಮಡಿಕೇರಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ತೆರಳಿತು.

ಉಳಿದ ಸದಸ್ಯರು ಪೊನ್ನಂಪೇಟೆ ಗಾಂಧಿ ಮಂಟಪದ ಬಳಿ ಧರಣಿ ಕುಳಿತು ಹೋರಾಟವನ್ನು ಮುಂದುವರಿಸಿದರು. ಹಿರಿಯ ವಕೀಲ ಮತ್ರಂಡ ಅಪ್ಪಚ್ಚು ಅವರು, ‘ಹೋರಾಟ ಸಮಿತಿ ಸದಸ್ಯರು ಚರ್ಚಿಸಿ ಹೋರಾಟದ ಮುಂದಿನ ರೂಪರೇಷೆ ನಿರ್ಧರಿಸುವರು’ ಎಂದರು.

ಕದಂಬ ಕನ್ನಡ ಸೇನೆ ರಾಜ್ಯ ಕಾನೂನು ಸಲಹೆಗಾರ ಸಂದೇಶ್ ನೆಲ್ಲಿತ್ತಾಯ ಅವರು, ‘ಮುಖ್ಯಮಂತ್ರಿ ಅವರಿಂದ ಸೂಕ್ತ ಭರವಸೆ ಲಭಿಸದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಹೇಳಿದರು. ಆದರೆ, ತಾಲ್ಲೂಕು ರಚಿಸಲು ಆಗ್ರಹಿಸಿ ನಡೆಯುತ್ತಿರುವ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ನುಡಿದರು. ನಾಗರಿಕ ವೇದಿಕೆ ಅಧ್ಯಕ್ಷ ಪಿ.ಬಿ.ಪೂಣಚ್ಚ, 70 ದಿನಗಳಿಂದ ಹೋರಾಟ ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲುತ್ತವೆ ಎಂದರು.

ADVERTISEMENT

ಶಂಕ್ರು ನಾಚಪ್ಪ ಅವರು ಕಿಗ್ಗಟ್ಟು ನಾಡು ಕುರಿತು ಕವಿತೆ ರಚಿಸಿ ವಾಚಿಸಿದರು. ಹಿರಿಯರಾದ ಚೆಪ್ಪುಡೀರ ಪೊನ್ನಪ್ಪ, ಚೆಪ್ಪುಡೀರ ಸೋಮಯ್ಯ, ಲಾಲಾ ಮುತ್ತಪ್ಪ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಕಾಳಿ ಮಾಡ ಮೋಟಯ್ಯ, ಕಿರಿಯಮಾಡ ಬೆಳ್ಳಿಯಪ್ಪ,ಕಟ್ಟೇರ ಲಾಲಪ್ಪ, ರಾಜ್ಯ ವಕ್ಚ್ಮಂಡಳಿ ಉಪಾಧ್ಯಕ್ಷ ಎ.ಎ.ಎರ್ಮು ಹಾಜಿ, ಪುಚ್ಚಿಮಾಡ ಹರೀಶ್, ಕೋಳೆರ ದಿಲೀಪ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೋಳೆರ ದಯಾ ಚಂಗಪ್ಪ, ಕಳ್ಳಂಗಡ ಶಂಭು ಗಣಪತಿ, ಮಾಣಿಪಂಡ ದೇವಯ್ಯ, ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಮೂಕಳೇರ ಲಕ್ಷ್ಮಣ, ಐನಂಡ ಬೋಪಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.