ಸುಂಟಿಕೊಪ್ಪ: ಇಲ್ಲಿನ ಗದ್ದೆಹಳ್ಳದಲ್ಲಿರುವ ಕೊಡಂಗಲ್ಲೂರು ಭದ್ರಕಾಳಿ ಕುರುಂಬ, ಭಗವತಿ ದೇವಸ್ಥಾನ ಮಹಾಪೂಜೆ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಶುಕ್ರವಾರ ಬೆಳಿಗ್ಗೆ ಗಣಪತಿ ಹೋಮದೊಂದಿಗೆ ವೈದಿಕ ಕೈಂಕರ್ಯಗಳಿಗೆ ಚಾಲನೆ ದೊರೆಯಿತು. ಸಂಜೆ ಗಣಪತಿ ಪೂಜೆ, ಸುಬ್ರಹ್ಮಣ್ಯ ದೇವರ ಪೂಜೆ, ನಂತರ ಮುತ್ತಪ್ಪ ದೇವರ ಬೆಳ್ಳಾಟ ನಡೆದು ಮುತ್ತಪ್ಪ ದೇವರಿಗೆ ಪೈಂಗುತ್ತಿ ನಡೆಯಿತು.
ರಾತ್ರಿ ಚಾಮುಂಡೇಶ್ವರಿ ಪೂಜೆ, ಗುಳಿಗನ ಪೂಜೆ, ಭದ್ರಕಾಳಿ ದೇವಿಗೆ ಅರ್ಚನೆ ಮತ್ತು ನೈವೇದ್ಯ ಪೂಜೆ ನೆರವೇರಿತು.
ಅನಂತರ ದೇವಿ ದರ್ಶನ ಭಕ್ತರಿಗೆ ನೀಡಲಾಯಿತು. ರಾತ್ರಿ 9.30ರ ನಂತರ ವಸೂರಿಮಲೆ ತಲಪುರಿ ಸ್ನಾನ ಮೆರವಣಿಗೆ ಆಕರ್ಷಣೀಯವಾಗಿ ಮೂಡಿಬಂತು. ದಾರಿಯುದ್ದಕ್ಕೂ ಭಕ್ತರ ಉದ್ಘೋಷ, ಕೇರಳದ ಚಂಡೆ ವಾದ್ಯದೊಂದಿಗೆ ಹಣತೆ ಹಿಡಿದು ಮಹಿಳೆಯರು, ಮಕ್ಕಳು ಮೆರವಣಿಗೆ ಮೂಲಕ ಸಾಗಿ ನಂತರ ದೇವಾಲಯದಲ್ಲಿ ಸಮಾಪ್ತಿಗೊಂಡಿತು.
ನಂತರ ವಸೂರಿಮಾಲೆ ದೇವರ ಬೆಳ್ಳಾಟಂ ಮತ್ತು ದೇವಿಯ ದರ್ಶನ ನಡೆಯಿತು. ಇದೇ ವೇಳೆ ದೇವಿಯಲ್ಲಿ ತಮ್ಮ ಬೇಡಿಕೆ ಮತ್ತು ಹರಕೆ ಸಲ್ಲಿಸಿ ಸಂತೃಪ್ತಗೊಂಡರು. ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು. ಶನಿವಾರ ಬೆಳಿಗ್ಗೆ 9 ಗಂಟೆಗೆ ದೇವಿ ಹರಕೆ, 10 ರಿಂದ 11ವರೆಗೆ ದೇವಿಗೆ ಅರ್ಪಣೆ ಮತ್ತು ಅನ್ನಸಂತರ್ಪಣೆ ನಡೆಯಿತು. ಸುಂಟಿಕೊಪ್ಪ, ಗದ್ದೆಹಳ್ಳ, ಬಾಳೆಕಾಡು, ಕೆದಕಲ್, ಕಂಬಿಬಾಣೆ, ಮಾದಾಪುರ ಸೇರಿದಂತೆ ಕೇರಳದ ಭಕ್ತರು ಆಗಮಿಸಿದ್ದರು.
ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪ ಮತ್ತು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ದೇವಾಲಯದ ಮುಖ್ಯಸ್ಥರಾದ ಪಿ.ಆರ್.ಸುಕುಮಾರ್, ಸುನಿಲ್ ಕುಮಾರ್, ಶಾಂತ ರಾಮಕೃಷ್ಣ, ಪುಟ್ಟಬಸಪ್ಪ, ರೂಪಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.