ADVERTISEMENT

ಸುಂಟಿಕೊಪ್ಪ | ಮೊಗ್ರಲ್ ಎಫ್‌ಸಿ ಕುಂಬ್ಳೆ ತಂಡಕ್ಕೆ ಮುನ್ನಡೆ

ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿ: ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರು

​ಪ್ರಜಾವಾಣಿ ವಾರ್ತೆ
Published 18 ಮೇ 2025, 14:44 IST
Last Updated 18 ಮೇ 2025, 14:44 IST
ಸುಂಟಿಕೊಪ್ಪ ಬ್ಲೂ ಬಾಯ್ಸ್ ಯುವಕ ಸಂಘದ ವತಿಯಿಂದ ಆಯೋಜಿಸಿರುವ 26ನೇ ವರ್ಷದ ಡಿ. ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯ ಮೂರನೇ ದಿನವಾದ ಭಾನುವಾರದ ಪಂದ್ಯವನ್ನು ಭಾರತೀಯ ಸೇನೆಯ ನಿವೃತ್ತ ಯೋಧ ಮಧುಸೂದನ್ ಚೆಂಡು ಒದೆಯುವುದರ ಮೂಲಕ ಉದ್ಘಾಟಿಸಿದರು
ಸುಂಟಿಕೊಪ್ಪ ಬ್ಲೂ ಬಾಯ್ಸ್ ಯುವಕ ಸಂಘದ ವತಿಯಿಂದ ಆಯೋಜಿಸಿರುವ 26ನೇ ವರ್ಷದ ಡಿ. ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯ ಮೂರನೇ ದಿನವಾದ ಭಾನುವಾರದ ಪಂದ್ಯವನ್ನು ಭಾರತೀಯ ಸೇನೆಯ ನಿವೃತ್ತ ಯೋಧ ಮಧುಸೂದನ್ ಚೆಂಡು ಒದೆಯುವುದರ ಮೂಲಕ ಉದ್ಘಾಟಿಸಿದರು   

ಸುಂಟಿಕೊಪ್ಪ: ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಬ್ಲೂ ಬಾಯ್ಸ್ ಯುವಕ ಸಂಘದ ವತಿಯಿಂದ ನಡೆಯುತ್ತಿರುವ 26ನೇ ವರ್ಷದ ಡಿ. ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಮೊಗ್ರಲ್ ಎಫ್.ಸಿ ಕುಂಬ್ಳೆ ತಂಡ ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.

ಮೊದಲ ಪಂದ್ಯವು ಮೊಗ್ರಲ್ ಎಫ್‌ಸಿ ಕುಂಬ್ಳೆ ಮತ್ತು ಸ್ವರ್ಣ ಎಫ್‌ಸಿ ಮಂಡ್ಯ ತಂಡಗಳ ನಡುವೆ ನಡೆಯುತು‌‌. ಹಳೆಯ ಆಟಗಾರರನ್ನು ಒಳಗೊಂಡ ಮಂಡ್ಯ ತಂಡ ಹಾಗೂ ಯುವ ಆಟಗಾರರನ್ನು ಒಳಗೊಂಡ ಕುಂಬ್ಳೆ ತಂಡಗಳ ನಡುವೆ ಸಮಬಲದ ಪೈಪೋಟಿ ನಡೆಯಿತು‌. 2 ತಂಡಗಳು ಹೊಂದಾಣಿಕೆಯ ಆಟಕ್ಕೆ ಒತ್ತು ನೀಡಿದ್ದು ಪ್ರೇಕ್ಷಕರ ಮನರಂಜಿಸಿತು‌‌. ಒಂದು ಹಂತದಲ್ಲಿ ಕುಂಬ್ಳೆ ತಂಡದ ಆಟಗಾರರು ಚೆಂಡನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಮಂಡ್ಯ ತಂಡಕ್ಕೆ  ಬೆವರಿಳಿಸಿದರು‌.

ಪಂದ್ಯದ ಮೊದಲಾರ್ಧದ 8ನೇ ನಿಮಿಷದಲ್ಲಿ ಕುಂಬ್ಳೆ ತಂಡದ ಮುನ್ನಡೆ ಆಟಗಾರ ಆಬೀದ್ ಅವರು ಮೊದಲ ಗೋಲನ್ನು ಹೊಡೆಯುವುದರ ಮೂಲಕ ತಂಡಕ್ಕೆ ಮುನ್ನಡೆಯನ್ನು ತಂದುಕೊಟ್ಟರು. ಆನಂತರ ಪಂದ್ಯ ಬಿರುಸಿನಿಂದ ಕೂಡಿತ್ತು. ಮಂಡ್ಯದ ತಂಡದ ಆಟಗಾರರು ಕುಂಬ್ಳೆ ತಂಡದ ಗೋಲುಪಟ್ಟಿಗೆ ಚೆಂಡು ಹೊಡೆದರೂ ಗೋಲುಕೀಪರ್ ಅವರ ಆಕರ್ಷಕ ಹಿಡಿತದಿಂದ ಗೋಲು ಗಳಿಸುವಲ್ಲಿ ವಿಫಲವಾಯಿತು. ಇದರೊಂದಿಗೆ ಮೊಗ್ರಲ್ ಎಫ್.ಸಿ‌.ಕುಂಬ್ಳೆ ತಂಡವು ಮೊದಲಾರ್ಧದಲ್ಲಿ 1–0 ಗೋಲುಗಳ ಮುನ್ನಡೆ ಪಡೆದುಕೊಂಡಿತು‌.

ADVERTISEMENT

ದ್ಚಿತೀಯಾರ್ಧದಲ್ಲಿ ಕುಂಬ್ಳೆ ತಂಡವು ಸಂಪೂರ್ಣವಾಗಿ ಚೆಂಡಿನ ಮೇಲೆ ಹತೋಟಿ ಸಾಧಿಸಿತು‌‌. ಉತ್ತಮ ಪಾಸ್‌ಗಳ ಮೂಲಕ ಕ್ರೀಡಾಭಿಮಾನಿಗಳಿಗೆ ಮನರಂಜನೆ ನೀಡಿದ ತಂಡದ ಆಟಗಾರರು, ಪಂದ್ಯದ ಎರಡನೇ ನಿಮಿಷದಲ್ಲಿ ಮತ್ತೊಮ್ಮೆ ಆಬೀದ್ ಗೋಲು ಹೊಡೆಯುವ ಮೂಲಕ ಮುನ್ನಡೆ ತಂದುಕೊಟ್ಟರು‌‌.

ಈ ನಡುವೆ ಮಂಡ್ಯ ತಂಡ ಹಂತ ಹಂತವಾಗಿ ಗೋಲು ಹೊಡೆಯುವ ವಿಫಲ ಯತ್ನ ನಡೆಸಿತು. ಮಂಡ್ಯ ತಂಡಕ್ಕೆ ಗೋಲು ಗಳಿಸಲು ಬಹಳಷ್ಟು ಅವಕಾಶ ಗಳಿದ್ದರೂ ಆಟಗಾರರ ತಪ್ಪಿನಿಂದ ವಿಫಲಗೊಂಡಿತು‌. ಆದರೆ ಕುಂಬ್ಳೆ ತಂಡ ಮಾತ್ರ ಮಂಡ್ಯ ತಂಡದ ಗೋಲು ಪಟ್ಟಿಯೊಳಗೆ ಲಗ್ಗೆ ಇಡಲು ಆರಂಭಿಸಿತು, ಪಂದ್ಯದ 13 ನಿಮಿಷದಲ್ಲಿ ನಿಶಾದ್ ಅವರು ಆಕರ್ಷಕವಾದ ಗೋಲು ಹೊಡೆಯುವ ಮೂಲಕ ತಂಡಕ್ಕೆ ಇನ್ನಷ್ಟು ಬಲ ನೀಡಿದರು.

ಚಾಕಚಕ್ಯತೆಯ ಆಟವನ್ನು ಮುಂದುವರಿಸಿದ ಕುಂಬ್ಳೆ ತಂಡ ಮತ್ತೊಮ್ಮೆ ಮಂಡ್ಯ ತಂಡಕ್ಕೆ ಆಘಾತ ನೀಡಿತು. ಪಂದ್ಯದ 17 ನೇ ನಿಮಿಷದಲ್ಲಿ ರಶೀದ್ ಹೊಡೆದ ಚೆಂಡು ಗೋಲು ಕೀಪರ್ ಕಣ್ತಪ್ಪಿಸಿ ಗೋಲು ಪಟ್ಟಿಯೊಳಗೆ ನುಸುಳುವುದರ ಮೂಲಕ ಜಯದ ನಗೆ ಬೀರಿದರು‌‌. ಕೊನೆಯ ನಿಮಿಷದಲ್ಲಿ ಮಂಡ್ಯದ ಆಟಗಾರ ಹೊಡೆದ ಚೆಂಡು ಗೋಲು ಪಟ್ಟಿಗೆ ತಗುಲಿ ವಾಪಾಸಾಗುವುದರೊಂದಿಗೆ ತಂಡಕ್ಕೆ ನಿರಾಸೆ ಮೂಡಿತು‌‌‌. ಕೊನೆಗೆ ಮೊಗ್ರಲ್ ಕುಂಬ್ಳೆ ತಂಡ 4–0 ಗೋಲುಗಳಿಂದ ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು‌‌.

ದಿನದ ಎರಡನೇ ಪಂದ್ಯಕ್ಕೆ ಮಂಗಳೂರು ಮತ್ತು ಬೆಂಗಳೂರು ತಂಡಗಳು ಮೈದಾನಕ್ಕೆ ಬಾರದ ಹಿನ್ನಲೆಯಲ್ಲಿ ಎರಡು ತಂಡಕ್ಕೆ ವಾಕ್ ಓವರ್ ನೀಡಲಾಯಿತು. ಭಾನುವಾರದ ಫುಟ್‌ಬಾಲ್ ಪಂದ್ಯವನ್ನು ಭಾರತೀಯ ಸೇನೆಯನಿವೃತ್ತ ಯೋಧ ಮಧುಸೂದನ್ ಚೆಂಡು ಒದೆಯುವುದರ ಮೂಲಕ ಉದ್ಘಾಟಿಸಿದರು.

ಇದೇ ಬಿಬಿವೈಸಿ ಅಧ್ಯಕ್ಷ ಆಲಿಕುಟ್ಟಿ, ಗೌರವಾಧ್ಯಕ್ಷ ಟಿ.ವಿ.ಪ್ರಸನ್ನ, ಪದಾಧಿಕಾರಿಗಳಾದ ಬಿ.ಕೆ.ಪ್ರಶಾಂತ್, ಅನಿಲ್ ಕುಮಾರ್, ವಾಸುದೇವ, ಕಾಫಿ ಬೆಳೆಗಾರ ತಿಮ್ಮಪ್ಪ, ಶಾರ್ಜದ ಉದ್ಯಮಿ ಅಬ್ಬಾಸ್, ಗ್ರಾಮ ಪಂಚಾಯಿತಿ‌‌ ಸದಸ್ಯರಾದ ಸೋಮನಾಥ್, ಪ್ರಸಾದ್ ಕುಟ್ಟಪ್ಪ, ಶಬೀರ್, ರಫೀಕ್ ಖಾನ್, ಹಿರಿಯ ಆಟಗಾರ ಬಿ.ಸಿ.ದಿನೇಶ್ ಇದ್ದರು.

ಇಂದಿನ ಪಂದ್ಯಗಳು: ಮದ್ಯಾಹ್ನ 3 ಗಂಟೆಗೆ ಬ್ಲೂ ಬಾಯ್ಸ್ ಯುವಕ ಸಂಘ ಸುಂಟಿಕೊಪ್ಪ ಮತ್ತು ನೇತಾಜಿ ಯುವಕ ಸಂಘ ಕೊಡಗರಹಳ್ಳಿ,
ಸಂಜೆ 4 ಗಂಟೆಗೆ ಶೀತಲ್ ಎಫ್.ಸಿ.ಮೈಸೂರು ಮತ್ತು ಇಕೆಎನ್ ಎಫ್‌ಸಿ‌ ಕೋಳಿಕಡವ್ ಇರಿಟಿ, ಕಣ್ಣೂರು.

ಸುಂಟಿಕೊಪ್ಪ ಜಿಎಂಪಿ ಶಾಲಾ ಮೈದಾನದಲ್ಲಿ ನಡೆದ ಮೊಗ್ರಲ್ ಎಫ್.ಸಿ ಕುಂಬ್ಳೆ ಮತ್ತು ಸ್ವರ್ಣ ಎಫ್.ಸಿ‌.ಮಂಡ್ಯ ತಂಡಗಳ ನಡುವಿನ ಆಕರ್ಷಕ ಪಂದ್ಯ
ಸುಂಟಿಕೊಪ್ಪ ಜಿಎಂಪಿ ಶಾಲಾ ಮೈದಾನದಲ್ಲಿ ನಡೆದ ಮೊಗ್ರಲ್ ಎಫ್.ಸಿ ಕುಂಬ್ಳೆ ಮತ್ತು ಸ್ವರ್ಣ ಎಫ್.ಸಿ‌.ಮಂಡ್ಯ ತಂಡಗಳ ನಡುವಿನ ಆಕರ್ಷಕ ಪಂದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.