ಸಿದ್ದಾಪುರ (ಕೊಡಗು ಜಿಲ್ಲೆ): ಮದ್ಯ ಸಿಕ್ಕಿಲ್ಲವೆಂದು ಕೋಪಗೊಂಡ ವ್ಯಕ್ತಿಯೊಬ್ಬರು ತನ್ನ ಕಾಲನ್ನೇ ತಾನೇ ಕತ್ತರಿಸಿಕೊಂಡ ವಿಚಿತ್ರ ಘಟನೆ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಕಾರ್ಮಾಡು ಗ್ರಾಮದಲ್ಲಿ ನಡೆದಿದೆ.
ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವಾಸಿ ಪಾಪಣ್ಣ (42) ಎಂಬುವರು ಮದ್ಯ ವ್ಯಸನಿಯಾಗಿದ್ದು, ಲಾಕ್ಡೌನ್ ವೇಳೆ ಮದ್ಯ ಸಿಗದ ಕಾರಣಕ್ಕೆ ಖಿನ್ನತೆಗೆ ಒಳಗಾಗಿ, ಮನೆಯಲ್ಲಿ ತಾಯಿಯೊಂದಿಗೆ ಜಗಳವಾಡುತ್ತಿದ್ದರು ಎನ್ನಲಾಗಿದೆ. ಬುಧವಾರ ರಾತ್ರಿ ಮನೆಯಲ್ಲಿದ್ದ ಸಂದರ್ಭ ಪಾಪಣ್ಣ ಮದ್ಯ ಸಿಗದ ಕಾರಣ ಕತ್ತಿಯಿಂದ ತನ್ನ ಬಲ ಕಾಲನ್ನು ತಾನೇ ಕತ್ತರಿಸಿಕೊಂಡಿದ್ದಾರೆ. ಕಡಿದ ರಭಸಕ್ಕೆ ಬಲಕಾಲು ತುಂಡಾಗಿ, ಪಾದದ ಭಾಗ ನೆಲಕ್ಕೆ ಹಾರಿದೆ.
ತೀವ್ರ ರಕ್ತಸ್ರಾವಗೊಂಡಿದ್ದ ಪಾಪಣ್ಣ ಅವರನ್ನು ಸ್ಥಳೀಯರು ಅಮ್ಮತ್ತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಪಣ್ಣ ವಾಲಗ ಕಲಾವಿದರಾಗಿದ್ದು, ಈ ಹಿಂದೆ ಮದುವೆ ಹಾಗೂ ಇನ್ನಿತರ ಸಮಾರಂಭಕ್ಕೆ ವಾಲಗ ನುಡಿಸಲು ತೆರಳುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.