ADVERTISEMENT

ಪೈಪ್‌ಲೈನ್ ಗುಂಡಿ ಮುಚ್ಚದೇ ತೊಂದರೆ

ಪಟ್ಟಣ ‍ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 6:04 IST
Last Updated 30 ಜುಲೈ 2025, 6:04 IST
ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಜಯಂತಿ ಶಿವಕುಮಾರ್, ಬಿ.ಆರ್.ಮಹೇಶ್, ಮೋಹಿನಿ ಪಾಲ್ಗೊಂಡಿದ್ದರು
ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಜಯಂತಿ ಶಿವಕುಮಾರ್, ಬಿ.ಆರ್.ಮಹೇಶ್, ಮೋಹಿನಿ ಪಾಲ್ಗೊಂಡಿದ್ದರು   

ಸೋಮವಾರಪೇಟೆ: ಅಮೃತ್ 2.0 ಯೋಜನೆಯ ಕಾಮಗಾರಿಗೆ ಸಂಬಂಧಿಸಿದಂತೆ, ಪೈಪ್‌ ಅಳವಡಿಸಲು ರಸ್ತೆಯಲ್ಲಿ ಸಿಕ್ಕ ಸಿಕ್ಕಲ್ಲಿ ಗುಂಡಿ ತೆಗೆದಿದ್ದು, ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಆದರೂ ಗುತ್ತಿಗೆದಾರರು ಕಾಮಗಾರಿ ಮುಗಿಸುತ್ತಿಲ್ಲ ಎಂದು ಪಟ್ಟಣ ಪಂಚಾಯಿತಿ ಸದಸ್ಯರು ದೂರಿದರು.

ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಜಯಂತಿ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೌನ್ಸಿಲ್ ಸದಸ್ಯರ ಸಾಮಾನ್ಯ ಸಭೆಯಲ್ಲಿ 11 ವಾರ್ಡ್‌ಗಳಲ್ಲಿ ರಸ್ತೆಯ ಗುಂಡಿಗಳ ಬಗ್ಗೆ ತೀವ್ರ ಚರ್ಚೆ ನಡೆಯಿತು.

‘ಕೆಲವೆಡೆ ಒಂದು ಅಡಿ ಆಳದ ಗುಂಡಿಗಳಿವೆ. ವಾಹನಗಳಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಸಭೆಗಳಿಗೆ ಸಂಬಂಧಿಸಿದ ಎಂಜಿನಿಯರ್‌ಗಳನ್ನು ಕರೆಸಿ ಕಳುಹಿಸಲಾಗುತ್ತಿದೆ. ಕಾಮಗಾರಿ ಮುಗಿಸಲು ಒಂದು ತಿಂಗಳು ಬಾಕಿ ಇದೆ’ ಎಂದು ಸದಸ್ಯರಾದ ಮೃತ್ಯುಂಜಯ, ಕಿರಣ್, ಜೀವನ್, ಶೀಲಾ ಡಿಸೋಜಾ ಸೇರಿದಂತೆ ಹಲವು ಸದಸ್ಯರು ತಿಳಿಸಿದರು.

ADVERTISEMENT

ಸಮಸ್ಯೆಗಳ ಬಗ್ಗೆ ಫೋಟೊಗಳೊಂದಿಗೆ ಜಿಲ್ಲಾಧಿಕಾರಿಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಲು ಸಭೆಯಲ್ಲಿ ತೀರ್ಮಾನಿಸಿತು.

‘ಪೌರ ಕಾರ್ಮಿಕರ ನಿವೇಶನದ ಫೈಲ್‌ಗಳು ನಾಪತ್ತೆಯಾಗಿರುವ ಬಗ್ಗೆ ಸಿಸಿಟಿವಿ ಕ್ಯಾಮೆರಾಗಳ ಫೂಟೇಜ್‌ನೊಂದಿಗೆ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ’ ಎಂದು ಪಂಚಾಯಿತಿ ಮುಖ್ಯಾಧಿಕಾರಿ ಸತೀಶ್ ಮಾಹಿತಿ ನೀಡಿದರು.

‘ಈ ಹಿಂದೆ ಪಟ್ಟಣ ಪಂಚಾಯಿತಿ ಬಸವೇಶ್ವರ ರಸ್ತೆಯಲ್ಲಿ 5.5 ಸೇಂಟ್‌ ನಿವೇಶನವನ್ನು 8.5 ಸೆಂಟ್ ಆಗಿ ತಿದ್ದಿರುವ ಬಗ್ಗೆ ದಾಖಲಾತಿ ನೀಡಿದರೂ ಸರಿಯಾದ ಕ್ರಮ ತೆಗೆದುಕೊಳ್ಳಲಿಲ್ಲ. ಆ ವೇಳೆ ಸಂಬಂಧಪಟ್ಟ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಂಡಿದ್ದಲ್ಲಿ, ಇಂತಹ ಘಟನೆಗಳು ಮರುಕಳಿಸುತ್ತಿರಲಿಲ್ಲ’ ಎಂದು ಸದಸ್ಯ ಕಿರಣ್, ಉದಯಶಂಕರ್ ಹೇಳಿದರು.

‘ಕಾಯಂ ಪೌರಕಾರ್ಮಿಕರಿಗೆ ಗುಂಪು ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಲು ನಿಯಮದಲ್ಲಿ ಅವಕಾಶವಿದೆ. ಬೇರೆ ರೀತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಉಚಿತ ನಿವೇಶನ ನೀಡಲು ಅವಕಾಶವಿಲ್ಲ’ ಎಂದು ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು.

ಈ ವಿಷಯದ ಸಾಧಕ- ಬಾಧಕದ ಬಗ್ಗೆ ಅರೋಗ್ಯ ನಿರೀಕ್ಷಕ ಜಾಸ್ಮಿನ್ ಖಾನ್ ಸಭೆಗೆ ಮನವರಿಕೆ ಮಾಡಿಕೊಟ್ಟರು. ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.

ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ಪೌರಕಾರ್ಮಿಕರಿಗೆ ಮಾನವೀಯ ದೃಷ್ಟಿಯಿಂದ ಉಚಿತ ನಿವೇಶನ ನೀಡಬೇಕು
ಪಿ.ಕೆ.ಚಂದ್ರು ಸದಸ್ಯ

3 ವರ್ಷಗಳ ಅವಧಿಗೆ ನೇಮಕ: ಆಗ್ರಹ

‘ಪಂಚಾಯಿತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು ಹಾಗೂ ನೀರುಗಂಟಿಗಳನ್ನು ಹೊರತುಪಡಿಸಿ ಉಳಿದ ಗುತ್ತಿಗೆ ಆಧಾರಿತ ಸಿಬ್ಬಂದಿಗೆ ಮೂರು ವರ್ಷಗಳಿಗೆ ಮಾತ್ರ ನೇಮಕಾತಿ ಮಾಡಿಕೊಳ್ಳಬೇಕು. ಪ್ರತಿವರ್ಷ ಬೇರೆ ಬೇರೆ ಹುದ್ದೆಗಳಿಗೆ ಬದಲಾವಣೆ ಮಾಡುವ ನಿರ್ಣಯ ಕೈಗೊಳ್ಳಬೇಕು’ ಎಂದು ಸದಸ್ಯರಾದ ಶೀಲಾ ಡಿಸೋಜ ಜೀವನ್ ಕಿರಣ್ ಮೃತ್ಯುಂಜಯ ವಿನಯ್ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.