ಸುಂಟಿಕೊಪ್ಪ: ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣ ಪ್ರಾಂತ್ಯದ ಸುಂಟಿಕೊಪ್ಪದಲ್ಲಿರುವ ಇಮ್ಯಾನ್ವೆಲ್ ದೇವಾಲಯದಲ್ಲಿ ವಾರ್ಷಿಕ ಬೆಳೆ ಹಬ್ಬ ಶ್ರದ್ಧಾಭಕ್ತಿಯಿಂದ ಭಾನುವಾರ ನಡೆಯಿತು.
ಬೆಳೆ ಹಬ್ಬದ ಅಂಗವಾಗಿ ಚರ್ಚ್ ಹಾಗೂ ಆವರಣವನ್ನು ಕಬ್ಬು, ಭತ್ತದ ಪೈರು, ಪುಷ್ಪ ಹಾಗೂ ಫಲ ವಸ್ತುಗಳಿಂದ ಸಿಂಗರಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿದ್ದ ಕೊಡಗು ವಲಯಾಧ್ಯಕ್ಷ ಮತ್ತು ಸಭಾಪಾಲಕರಾದ ರೆ.ಫಾ. ಜೈಸನ್ಗೌಡರ್, ರೆ. ವಿನೋದ್ ಐಸಾಕ್ ಹಾಗೂ ಸುಂಟಿಕೊಪ್ಪ ಸಭಾಪಾಲಕರಾದ ಮಧುಕಿರಣ್ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರಾರ್ಥನೆ, ಆಶೀರ್ವಚನ ನೀಡಿದರು.
ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣ ಪ್ರಾಂತ್ಯದ ದೇವಾಲಯಗಳ ಕೊಡಗು ವಲಯಾಧ್ಯಕ್ಷ ಮತ್ತು ಸಭಾಪಾಲಕರಾದ ರೆ.ಫಾ. ಜೈಸನ್ಗೌಡರ್ ಮಾತನಾಡಿ, ‘ನಮ್ಮ ಚರ್ಚ್ಗಳ ವಾರ್ಷಿಕ ವಿಧಿವಿಧಾನಗಳಲ್ಲಿ ಬೆಳೆ ಹಬ್ಬವು ಪ್ರಮುಖವಾಗಿದ್ದು, ಸತ್ಯವೇದ ಅಥವಾ ಬೈಬಲಿನ ಪ್ರಕಾರ ಭಕ್ತರು ತಾವು ಬೆಳೆದ ಕೃಷಿ ಉತ್ಪನ್ನ ಮತ್ತು ಬೆಳೆದ ಫಲ ವಸ್ತುಗಳನ್ನು ಮೊದಲ ಕಾಣಿಕೆಯಾಗಿ ದೇವರಿಗೆ ಅರ್ಪಿಸುವುದು ಒಂದು ಪದ್ಧತಿ ಮತ್ತು ನಂಬಿಕೆಯ ಪ್ರತೀಕವಾಗಿದೆ’ ಎಂದರು.
‘ಇದರ ಮೂಲಕ ನಮ್ಮನ್ನು ನಾವು ದೇವರಿಗೆ ಕಾಣಿಕೆಯಾಗಿ ಸಮರ್ಪಿಸಿಕೊಳ್ಳುವದಾಗಿದೆ. ಇದರಿಂದ ನಮ್ಮ ಜೀವನದಲ್ಲಿ ಯೇಸು ಕ್ರಿಸ್ತನ ಕೃಪೆ ಮತ್ತು ಆಶೀರ್ವಾದಗಳಿಗೆ ಪಾತ್ರರಾಗಿ ಜೀವನವನ್ನು ಮುನ್ನಡೆಸುವುದಾಗಿದೆ’ ಎಂದು ಹೇಳಿದರು.
ಬೆಳೆಹಬ್ಬವು ಭಾನುವಾರ ಪ್ರಾತಃಕಾಲದ ಪ್ರಾರ್ಥನೆ ಮತ್ತು ಪೂಜಾ ವಿಧಾನಗಳೊಂದಿಗೆ ಆರಂಭವಾಗಿ ವಿವಿಧ ಫಲ ವಸ್ತುಗಳ ಹರಾಜು ಪ್ರಕ್ರಿಯೆಯ ನಂತರ ಸಾಮೂಹಿಕ ಭೋಜನದೊಂದಿಗೆ ಸಂಜೆಯವರೆಗೂ ಆಟೋಟ ಸ್ಪರ್ಧೆಗಳು ನಡೆದು ಬಹುಮಾನ ವಿತರಣೆ ನಡೆಯಿತು.
ಕಾರ್ಯಕ್ರಮವು ಸುಂಟಿಕೊಪ್ಪ ಸಭಾಪಾಲಕರಾದ ಮಧುಕಿರಣ್ ಅವರ ಉಸ್ತುವಾರಿಯಲ್ಲಿ ಚರ್ಚ್ನ ಭಕ್ತರ ಸಹಕಾರದೊಂದಿಗೆ ನೆರವೇರಿತು.
ಕಾರ್ಯಕ್ರಮದಲ್ಲಿ ಸಭಾಪಾಲನಾ ಸಮಿತಿಯವರು, ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಕ್ರೈಸ್ತರು ಸಂಭ್ರಮದಿಂದ ಪಾಲ್ಗೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.