ಮಡಿಕೇರಿ: 'ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದು, ಸತ್ಯಾಸತ್ಯತೆ ತಿಳಿಯಲು ಇಡೀ ಪ್ರಕರಣವನ್ನು ರಾಜ್ಯ ಸರ್ಕಾರ ಧೈರ್ಯವಾಗಿ ತನಿಖೆಗೆ ವಹಿಸಬೇಕು' ಎಂದು ಬಿಜೆಪಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಇಲ್ಲಿ ಶುಕ್ರವಾರ ಆಗ್ರಹಿಸಿದರು.
ನಗರದ ಹಳೇ ಕೋಟೆ ವೀಕ್ಷಣೆಯ ಬಳಿಕ ಮಾತನಾಡಿದ ಅವರು, 'ವಿರೋಧ ಪಕ್ಷದ ಮುಖಂಡರು ಆರೋಪ ಮಾಡಿದಾಗ ಆಡಳಿತ ಪಕ್ಷದ ಮಂತ್ರಿಗಳು ಸರಿಯಾದ ದಾಖಲೆಗಳನ್ನು ಜನರ ಎದುರು ಇಡಬೇಕು. ಕೆಲವು ದಾಖಲೆಗಳನ್ನು ಕೊಟ್ಟಿದ್ದಾರೆ. ಇನ್ನು ವಿರೋಧ ಪಕ್ಷದವರೂ ಸರಿಯಾದ ದಾಖಲೆಗಳೊಂದಿಗೆ ಆರೋಪ ಮಾಡಬೇಕು. ಕೇವಲ ₹600 ಕೋಟಿಯಷ್ಟು ಹಣ ಖರ್ಚು ಮಾಡಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ವಿರೋಧ ಪಕ್ಷದವರು ₹4,000 ಕೋಟಿಯಷ್ಟು ಖರ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹೀಗಿರುವಾಗ ಸತ್ಯಾಸತ್ಯತೆ ಅರಿಯಲು ತನಿಖೆ ಅಗತ್ಯ. ನ್ಯಾಯಾಂಗ ತನಿಖೆ ಸೇರಿದಂತೆ ಯಾವುದಾದರು ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲಿ' ಎಂದು ಅಪ್ಪಚ್ಚು ರಂಜನ್ ಹೇಳಿದರು.
'ಇಂತಹ ಸಂದರ್ಭದಲ್ಲಿ ದುರುಪಯೋಗವೇ ನಡೆದಿದ್ದರೆ ಅಂಥವರ ನೇಣಿಗೆ ಹಾಕುವ ಕೆಲಸವೂ ಆಗಬೇಕು. ಆದರೆ, ನನಗೆ ತಿಳಿದಿರುವ ಮಟ್ಟಿಗೆ ಯಾವುದೇ ಅವ್ಯವಹಾರ ನಡೆದಿಲ್ಲ. ಯಾರೇ ಆರೋಪ ಮಾಡಿದರೂ ತನಿಖೆ ಮಾಡುವುದು ಸಹಜ. ಈ ಸಂದರ್ಭದಲ್ಲಿ ಕೆಸರೆರಚಾಟ ಬೇಕಿರಲಿಲ್ಲ. ತನಿಖೆ ಆಗಲಿ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.