
ಕುಶಾಲನಗರ: ಅರೆಭಾಷೆ ಸಮುದಾಯದವರು ತಮ್ಮ ಆಚಾರ - ವಿಚಾರ ಹಾಗೂ ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಅಳವಡಿಸಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಸೂದನ ಗೋಪಾಲ್ ಹೇಳಿದರು.
ಚಿಕ್ಕತ್ತೂರು ಅರೆಭಾಷೆ ಒಕ್ಕೂಟ ಭಾನುವಾರ ಹಮ್ಮಿಕೊಂಡಿದ್ದ ಸಂತೋಷ ಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆ , ಸಂಸ್ಕೃತಿ ಅವಿನಾಭಾವ ಸಂಬಂಧ ಹೊಂದಿದ್ದು,. ಇವೆರಡು ನಾಶವಾದರೆ ಜನಾಂಗವೇ ನಾಶವಾದಂತೆ. ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳನ್ನು ಉಳಿಸಬೇಕು. ಏಕತೆ, ಓಗ್ಗಟ್ಟಿನ ಸಹಬಾಳ್ವೆ ಮುಖ್ಯ. ನಾಲ್ಕು ಸಾವಿರ ಭಾಷೆಗಳಲ್ಲಿ ಅರೆ ಭಾಷೆ ಕೂಡ ಒಂದು. ಅರೆ ಭಾಷೆಗೆ 5 ಶತಮಾನಗಳ ಇತಿಹಾಸವಿದೆ. ಶ್ರೀಮಂತ ಸಂಸ್ಕೃತಿ ಹೊಂದಿದೆ ಎಂದರು. ಅರೆಭಾಷೆ ಅಕಾಡೆಮಿ ಭಾಷೆಗೆ ಹೆಮ್ಮೆ. ಮಂಗಳೂರು ವಿಶ್ವ ವಿದ್ಯಾಲಯದ ಅರೆ ಭಾಷೆ ಸಂಶೋಧನಾ ಕೇಂದ್ರದ ಉಪಯೋಗ ಪಡೆದುಕೊಳ್ಳಬೇಕು ಎಂದು ಗೋಪಾಲ್ ಸಲಹೆ ನೀಡಿದರು.
ಚಿಕ್ಕತ್ತೂರು ಅರೆಭಾಷೆ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಚೆರಿಯಮನೆ ಮಾದಪ್ಪ ಮಾತನಾಡಿ, ಚಿಕ್ಕತ್ತೂರು ವ್ಯಾಪ್ತಿಯಲ್ಲಿ ನೆಲೆಸಿರುವ ಅರೆಭಾಷಿಗರನ್ನು ಒಂದೆಡೆ ಸೇರಿಸುವ ಪ್ರಯತ್ನ ವಾಗಿ ಒಕ್ಕೂಟ ಮಾಡಲಾಗಿದೆ. ವಾರ್ಷಿಕ ಸಂತೋಷ ಕೂಟ ಒಗ್ಗಟ್ಟಿನ ಪ್ರತೀಕ ಎಂದರು. ಶಿಕ್ಷಕಿ ಸೂದನ ಲೀಲಾಗೋಪಾಲ್ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಉತ್ತಮ ಪ್ರಜೆಗಳಾಗಿ ರೂಪಿಸಲು ಸಲಹೆ ನೀಡಿದರು.
ಮಕ್ಕಳಿಗೆ ವಿವಿಧ ಆಟೋಟಗಳು, ಮಹಿಳೆಯರು ಮತ್ತು ಪುರುಷರಿಗೆ ಗುಂಡು ಹೊಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸಮಾಜದ ನಿರ್ದೇಶಕ ಕರ್ಣಯ್ಯನ ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಕೋಶಾಧಿಕಾರಿ ಪೊಕ್ಕುಳಂಡ್ರ ಸುಂದರ, ನಿರ್ದೇಶಕರಾದ ಕುದುಪಜೆ ಹೊನ್ನಣ್ಣ, ಕಡ್ಯದ ಚಂದ್ರು, ಕರುಂಬಿ ಶಿವಪ್ಪ, ಸುಳ್ಳೇಕೋಡಿ ವಿಷುಕುಮಾರ್, ಮತ್ತಾರಿ ಹರ್ಷ, ಮೊಟ್ಟನ ನಾಗರಾಜು, ದೊಡ್ಡೇರಾ ಧನಪಾಲ್, ಚೆರಿಯಮನೆ ಶೀಲಾ, ಕುದುಪಜೆ ಗಿರಿಜಾವತಿ, ಪೊಕ್ಕುಳಂಡ್ರ ತುಳಸಿ ಮಣಿ, ಸ್ಥಳದಾನಿ ಲಲಿತಾ ಕೇಸರಿ ಪಾಲ್ಗೊಂಡಿದ್ದರು.