ಮಡಿಕೇರಿ: ಮಂಗಳೂರಿಗೆ ಹೋಗಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದ ಪರ್ಯಾಯ ರಸ್ತೆಯಲ್ಲೂ ಬಿರುಕು ಮೂಡಿದ್ದು, ಖಾಸಗಿ ಭಾರಿ ವಾಹನ ಸಂಚಾರವನ್ನು ಸೋಮವಾರ ರಾತ್ರಿಯಿಂದಲೇ ನಿಷೇಧಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆಯ ಸ್ಲ್ಯಾಬ್ಗಳು ಹೊರಚಾಚಿದ್ದರಿಂದ ಇಲ್ಲಿ ಸಂಚಾರ ನಿಷೇಧಿಸಿ ಮಡಿಕೇರಿ–ಮೇಕೇರಿ–ಅಪ್ಪಂಗಲ–ತಾಳತ್ತಮನೆ ಮಾರ್ಗದಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಸೋಮವಾರ ರಾತ್ರಿ ಮೇಕೇರಿ ಸಮೀಪ ಭಾರಿ ಗಾತ್ರದ ಬಿರುಕುಗಳು ಮೂಡಿದ್ದು, ರಸ್ತೆ ಕುಸಿಯುವ ಆತಂಕ ಮೂಡಿದೆ.
ಕೂಡಲೇ ಕಾರ್ಯತತ್ಪರರಾದ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ರಸ್ತೆಯ ಒಂದು ಬದಿ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿವೈಎಸ್ಪಿ ಗಜೇಂದ್ರಪ್ರಸಾದ್, ‘ಬಿರುಕು ಬಿಟ್ಟಿರುವ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ, ಖಾಸಗಿ ಭಾರಿ ವಾಹನಗಳನ್ನು ಸಂಚರಿಸಲು ಬಿಟ್ಟಿಲ್ಲ. ಕೆಎಸ್ಆರ್ಟಿಸಿಯ ಪ್ರಯಾಣಿಕ ವಾಹನಗಳಿಗೆ ಅವಕಾಶ ನೀಡಲಾಗಿದೆ’ ಎಂದರು.
ಈಗ ಮಂಗಳೂರಿಗೆ ತೆರಳುವ ಖಾಸಗಿ ಭಾರಿ ವಾಹನಗಳು ಶಿವಮೊಗ್ಗ – ಹೊನ್ನಾವರ ಮಾರ್ಗದಲ್ಲಿ ಮಾತ್ರವೇ ಸಂಚರಿಸಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.