ADVERTISEMENT

ಬಂದಿದ್ದು ‘ಹನಿ’ಗಾಗಿ, ಸಿಕ್ಕಿದ್ದು ‘ಪನ್ನೀರ ಹನಿ’!

ಕುಶಾಲನಗರದಲ್ಲಿ ಹಾ.ತಿ.ಜಯಪ್ರಕಾಶ್ ಅವರ ಚುಟುಕುಗಳ ಸಂಕಲನ ಬಿ.ಆರ್.ಲಕ್ಷ್ಮಣರಾವ್ ಅವರಿಂದ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 3:58 IST
Last Updated 28 ಅಕ್ಟೋಬರ್ 2024, 3:58 IST
<div class="paragraphs"><p>ಕವಿ ಬಿ.ಆರ್.ಲಕ್ಷ್ಮಣರಾವ್ ಅವರು ‘ಹನಿ’ ಚುಟುಕುಗಳ ಪುಸ್ತಕವನ್ನು ಬಿಡುಗಡೆ ಮಾಡಿ ಪುಸ್ತಕದ ಲೇಖಕ ಹಾ.ತಿ.ಜಯಪ್ರಕಾಶ್ ಅವರಿಗೆ ನೀಡಿದರು. </p></div>

ಕವಿ ಬಿ.ಆರ್.ಲಕ್ಷ್ಮಣರಾವ್ ಅವರು ‘ಹನಿ’ ಚುಟುಕುಗಳ ಪುಸ್ತಕವನ್ನು ಬಿಡುಗಡೆ ಮಾಡಿ ಪುಸ್ತಕದ ಲೇಖಕ ಹಾ.ತಿ.ಜಯಪ್ರಕಾಶ್ ಅವರಿಗೆ ನೀಡಿದರು.

   

ಮಡಿಕೇರಿ: ಒಂದು ‘ಹನಿ’ಯ ಅಭಿಮಾನಕ್ಕಾಗಿ ಹಾಡು ಹೇಳಲು ಬಂದಿದ್ದು ಹಾಸನದಿಂದ, ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದುದು ಅಮೆರಿಕಾದಿಂದ, ಬಂದವರಿಗೆ ಸಿಕ್ಕಿದ್ದು ಪನ್ನೀರ ಹನಿಯ ಸ್ವಾಗತ, ‘ಹನಿ’ ಲೋಕಾರ್ಪಣೆಗೊಂಡಿದ್ದು, ಖ್ಯಾತ ಕವಿ ಬಿ.ಆರ್.ಲಕ್ಷ್ಮಣರಾವ್ ಅವರಿಂದ...

ಹೀಗೆ ಈ ಅಪರೂಪದ ದೃಶ್ಯಗಳೆಲ್ಲವೂ ಕಂಡು ಬಂದಿದ್ದು ಕುಶಾಲನಗರದಲ್ಲಿನ ಚುಟುಕು ಕವಿ ಹಾ.ತಿ.ಜಯಪ್ರಕಾಶ್ ಅವರ ನಿವಾಸ ‘ವರವರದ’ದಲ್ಲಿ. ಭಾನುವಾರ ಇಲ್ಲಿ ಅವರ ‘ಹನಿ’ ಚುಟುಕು ಕವಿತೆಗಳ ಸಂಕಲನ ಬಿಡುಗಡೆ ಸಮಾರಂಭಕ್ಕೆ ಮಡಿಕೇರಿ, ಸೋಮವಾರಪೇಟೆ ಸೇರಿದಂತೆ ಜಿಲ್ಲೆಯ ಎಲ್ಲೆಡೆಗಳಿಂದ, ರಾಜ್ಯದ ಬೇರೆ ಬೇರೆ ಭಾಗಗಳಿಂದ ಹಾಗೂ ಅಮೆರಿಕದಿಂದ ಬಂದಿದ್ದ ಸಾಹಿತ್ಯಾಸಕ್ತರು ಭಾಗಿಯಾದರು. ಬಂದು ಕುಳಿತವರ ಮೇಲೆ ಜಯಪ್ರಕಾಶ್ ಅವರ ಸ್ವತಃ ತೆರಳಿ ಪನ್ನೀರ ಹನಿಗಳನ್ನು ಸಂಪಡಿಸಿ, ಸ್ವಾಗತ ಕೋರಿದರು.

ADVERTISEMENT

ಬಿ.ಆರ್.ಲಕ್ಷ್ಮಣರಾವ್ ಅವರು ತಮ್ಮದೇ ‘ನಿಂಬೆಗಿಡೆ’ ಕವನವನ್ನು ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಹಾಡಿ ಕಾರ್ಯಕ್ರಮದ ಮೆರುಗನ್ನು ಹೆಚ್ಛಿಸಿದರು. ‘ಬರೆಯುವುದೇನೋ ಚುಟುಕ, ಮಾತಿಗೆ ನಿಂತರೆ ಕಟುಕ’ ಎಂಬ ಡುಂಡಿರಾಜರ ಕವನದ ಮುಖೇನ ತಮ್ಮ ಭಾಷಣವನ್ನಾರಂಭಿಸಿದರೂ ತಮ್ಮ ಎಂದಿನ ನಯ, ವಿಡಂಬನೆ, ಹಾಸ್ಯದ ಮೂಲಕ ಸಭಿಕರನ್ನು ಕುರ್ಚಿಯಲ್ಲೇ ಕಟ್ಟಿ ಹಾಕಿದರು.

‘ಕೆಟ್ಟು ಕೂತಿತ್ತು ನಲ್ಲಿ ಕವಿಯ ಮನೆಯಲ್ಲಿ...’, ಸೇರಿದಂತೆ ಅನೇಕ ಹಾಸ್ಯ ಚುಟುಕುಗಳ ಮೂಲಕ ಓದುಗರನ್ನು ನಕ್ಕು ನಗಿಸಿದರು. ‘ತಮ್ಮೊಳಗಿನ ಕವಿಯನ್ನು ಇನ್ನಷ್ಟು ಚೆನ್ನಾಗಿ ನೋಡಿಕೊಂಡು, ಬೆಳೆಸಿ. ಕೇವಲ ಹನಿಗವಿತೆಗಳನ್ನು ಮಾತ್ರಬಲ್ಲ ಹಿಡಿಕವಿತೆಗಳನ್ನು ಬರೆಯಿರಿ’ ಎಂಬ ಕಿವಿಮಾತುಗಳನ್ನು ಜಯಪ್ರಕಾಶ್ ಅವರಿಗೆ ಹೇಳಿದರು.

ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು, ‘ಗೋಪಿ ಮತ್ತು ಗಾಂಡಲೀನ’ ಹಾಡು ಹಾಡಿದರು. ತಮ್ಮ ಕೆಲವು ಚುಟುಕುಗಳನ್ನು ವಾಚಿಸಿದರು.

ಹಾಸನದಿಂದ ಬಂದಿದ್ದ ಫಣಿವೇಣಿ ಅವರು ಬಿ.ಆರ್.ಲಕ್ಷ್ಮಣರಾವ್ ಅವರ ಭಾವಪ್ರಧಾನವಾದ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಭಾವನಾತ್ಮಕ ರಂಗು ತುಂಬಿದರು.

‘ನನ್ನ ಹನಿಗವಿತೆಗಳಿಗೆ ಡುಂಡಿರಾಜ ಮತ್ತು ದಿನಕರ ದೇಸಾಯಿ ಅವರ ಪ್ರೇರಣೆ’ ಎಂದು ಹೇಳುತ್ತಾ ಮಾತಿಗಿಳಿದ ಕವಿ ಹಾ.ತಿ.ಜಯಪ್ರಕಾಶ್ ತಾವು ಮೈಸೂರಿನಿಂದ ಮಡಿಕೇರಿಗೆ ನಡೆದುಕೊಂಡು ಬಂದ ಪ್ರಸಂಗವನ್ನು ಪ್ರಸ್ತಾಪಿಸಿ, ಅಂದೇ ನಾನು ಹನಿಗವಿತೆ ಬರೆಯಲು ಆರಂಭಿಸಿದೆ ಎಂದು ತಮ್ಮ ನೆನಪುಗಳನ್ನು ಮೆಲುಕು ಹಾಕಿದರು.

ವಾರ್ತಾ ಕಮ್ಯುನಿಕೇಷನ್ಸ್ ಹೊರತಂದಿರುವ ಒಟ್ಟು 64 ಪುಟಗಳ ಈ ಪುಸ್ತಕದಲ್ಲಿ 160 ಚುಟುಕಗಳು ಇದ್ದು, ಇದರ ಬೆಲೆ ₹ 100.

ಕಾರ್ಯಕ್ರಮದಲ್ಲಿ ಜಯಪ್ರಕಾಶ್ ಅವರ ಪತ್ನಿ ಜಯಲಕ್ಷ್ಮಿ ಭಾಗವಹಿಸಿದ್ದರು.

ಹಾ.ತಿ.ಜಯಪ್ರಕಾಶ್ ಅವರು ಮೌನ ಸ್ವಭಾವದ ಖುಷಿ. ಅವರು 30 ವರ್ಷಗಳಿಂದಲೂ ಬರೆಯುತ್ತಲೇ ಇದ್ದಾರೆ. ಈಗ ಸಂಕಲನವಾಗಿ ಹೊರಬಂದಿದೆ.
ಬಿ.ಜಿ.ಅನಂತಶಯನ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ.
ಚುಟುಕುಗಳು ಕವಿತೆಗಳ ಒಳಗೆ ಗುಟುಕಾಗಿ ಇರುತ್ತವೆ. ಅವು ಇರುವುದನ್ನು ಮುರಿದು ಕಟ್ಟುವ ಕ್ರಿಯೆ. ಇವು ಓದುಗರ ಗ್ರಹಿಕೆಗೆ ಬೇಗ ದಕ್ಕುತ್ತದೆ.
ಟಿ.ಪಿ.ರಮೇಶ್ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ.
ಆಕ್ಷಣದ ಭಾವವನ್ನು ಕ್ಕಿಕ್ಕಿಸುವುದೇ ಚುಟುಕ. ಹಾ.ತಿ.ಜಯಪ್ರಕಾಶ್ ಅವರು 70ನೇ ವಯಸ್ಸಿನಲ್ಲೂ ಅರಳುತ್ತಿದ್ದಾರೆ.
ನಾಗೇಶ್ ಕಾಲೂರು ಹಿರಿಯ ಸಾಹಿತಿ.
ಹಲವು ದಶಕಗಳಿಂದ ಬರೆಯುತ್ತಲೇ ಇರುವ ಹಾ.ತಿ.ಜಯಪ್ರಕಾಶ್ ಅವರ ಕೆಲವು ಆಯ್ದ ಕವಿತೆಗಳನ್ನಷ್ಟೇ ಇಲ್ಲಿ ಹೊರತರಲಾಗಿದೆ
ಎಚ್.ಟಿ.ಅನಿಲ್ ಪ್ರಕಾಶಕ.

‘ಸಾವಧಾನ ಇಲ್ಲ ಧಾವಂತವೇ ಎಲ್ಲ’

ಬಿ.ಆರ್.ಲಕ್ಷ್ಮಣರಾವ್ ಅವರು ಮಾತನಾಡಿ ‘ಇಂದು ಸಾವಧಾನ ಎಂಬುದು ಇಲ್ಲ. ಎಲ್ಲೆಡೆ ಧಾವಂತವೇ ಇದೆ’ ಎಂದು ಹೇಳಿದರು. ಈಗ ತಕ್ಷಣವೇ ಎಲ್ಲವೂ ಆಗಿಬಿಡಬೇಕು ಎನ್ನುವ ಆತುರ. ಎಷ್ಟರಮಟ್ಟಿಗೆ ಧಾವಂತ ಇದೆ ಎಂದರೆ ದರ್ಶಿನಿಗಳಲ್ಲಿ ಕೂತುಕೊಂಡೂ ತಿನ್ನುತ್ತಿಲ್ಲ. ಹಾಗೆಯೇ ಕವಿತೆಯೂ ಈಗ ಧಾವಂತದ ಕಾಲದಲ್ಲಿದೆ’ ಎಂದರು. ಜಯಪ್ರಕಾಶ್ ಅವರ ಹನಿಗವಿತೆಗಳಲ್ಲಿ ಪದಗಳ ಚಮತ್ಕಾರ ಕ್ಲೇಷೆ ಇದೆ. ಕೇವಲ ರಂಜನೆಗಷ್ಟೇ ಸೀಮಿತವಾದ ಪದ್ಯಗಳಿಲ್ಲ ಬದಲಿಗೆ ಸಾಮಾಜಿಕ ಸಂದೇಶ ನೀಡುವ ಪದ್ಯಗಳೂ ಇವೆ ಎಂದೂ ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.