ಸೋಮವಾರಪೇಟೆ: ‘ಭಾರತ ಜಾತ್ಯತೀತ ರಾಷ್ಟ್ರವಾಗಿದೆ. ಆದರೆ, ಇಲ್ಲಿಯೂ ಜಾತೀಯ ವಿಜೃಂಭಣೆ ಮೇಳೈಸುತ್ತಿದೆ. ಸಮಾಜವನ್ನು ತಿದ್ದಬೇಕಿರುವ ಧಾರ್ಮಿಕ ಕ್ಷೇತ್ರ ಕೂಡ ಇದಕ್ಕೆ ಹೊರತಾಗಿಲ್ಲ’ ಎಂದು ಮುಳ್ಳೂರು ಮಠದ ಮಠಾಧೀಶ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಗುರುವಾರ ನಡೆದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣಾರಾದಿಯಾಗಿ ಎಲ್ಲ ಶಿವಶರಣರು ಜಾತಿಯ ವಿರುದ್ಧ ಹೋರಾಡಿ, ಸಮಾಜಕ್ಕೆ ಸಮಾನತೆಯನ್ನು ಪ್ರತಿಪಾದಿಸಿದರು. ಈಗ ಅದು ತದ್ವಿರುದ್ದವಾಗಿದೆ. ಇಂದು ಸಮಾಜದ ಯಾವುದೇ ಕ್ಷೇತ್ರದಲ್ಲಿಯಾದರೂ ಗುರುವಿದ್ದರೆ, ಅವರ ಮಾರ್ಗದರ್ಶನದಿಂದ ಮಾತ್ರ ಉನ್ನತಿ ಸಾಧಿಸಲು ಸಾಧ್ಯ ಎಂದರು.
ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ನಮ್ಮ ಸಮಾಜದಲ್ಲಿ ಗುರುಗಳಿಗೆ ವಿಶೇಷ ಗೌರವದ ಸ್ಥಾನವಿದೆ. ನಾವು ಏನಾದರೂ ಸಾಧಿಸಬೇಕಾದರೆ ಮುಂದೆ ಗುರಿ ಇರಬೇಕು, ಹಿಂದೆ ಗುರು ಇದ್ದಲ್ಲಿ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.
ಸೋಮೇಶ್ವರ ದೇವಾಲಯದ ಅರ್ಚಕ ಚಿತ್ರಕುಮಾರ್ ಭಟ್, ನಿವೃತ್ತ ಶಿಕ್ಷಕಿ ತಂಗಮ್ಮ, ನಿವೃತ್ತ ಸೈನಿಕ ಚಂದ್ರಕುಮಾರ್, ಯೋಗ ಶಿಕ್ಷಕ ಪ್ರದೀಪ್ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.