
ಕುಶಾಲನಗರ: ಪಟ್ಟಣದ ಟೋಲ್ ಗೇಟ್ನಲ್ಲಿರುವ ಕಾವೇರಿ ದೇವಸ್ಥಾನದಲ್ಲಿ ಬಾರವಿ ಕನ್ನಡ ಅಭಿಮಾನಿ ಸಂಘದ ವತಿಯಿಂದ ಹುತ್ತರಿ ಹುಣ್ಣಿಮೆ ಹಾಗೂ ಹುತ್ತರಿ ಹಬ್ಬದ ಅಂಗವಾಗಿ ಗುರುವಾರ ರಾತ್ರಿ ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು.
ಅರ್ಚಕ ಪುರುಷೋತ್ತಮ್ ಭಟ್ ನೇತೃತ್ವದಲ್ಲಿ ಕಾವೇರಿ ಪ್ರತಿಮೆಗೆ ವಿವಿಧ ಪುಷ್ಪ ಹಾಗೂ ವಸ್ತ್ರಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿ ಮಹಾ ಆರತಿ ಬೆಳಗಲಾಯಿತು.
ಉದ್ಯಮಿ ಬೆಂಗಳೂರಿನ ಸುನಂದ ಕೌಶಿಕ್ ಹಾಗೂ ರುದ್ರೇಶ್ ಕುಟುಂಬಸ್ಥರು ಪೂಜಾ ಸೇವಾರ್ಥ ನೆರವೇರಿಸಿದರು. ಸುನಂದ ಹಾಗೂ ಕುಟುಂಬಸ್ಥರು ಕಾವೇರಿ ಮಾತೆಗೆ ವಸ್ತ್ರದಾನ ಮಾಡಿದರು.
ಪಿರಿಯಾಪಟ್ಟಣ ಪುರಸಭೆ ಸದಸ್ಯ ಆನಂದ್ ಮಾತನಾಡಿ, ‘ಜೀವನದಿ ಕಾವೇರಿಗೆ ತನ್ನದೆ ಪಾವಿತ್ರ್ಯತೆ ಇದೆ. ಈ ಬಗ್ಗೆ ಬಾರವಿ ಕನ್ನಡ ಅಭಿಮಾನಿ ಸಂಘದ ವತಿಯಿಂದ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಜೀವನದಿ ಕಾವೇರಿಗೆ ಕಲುಷಿತ ನೀರನ್ನು ಹರಿಸಬಾರದು. ನದಿಯ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಹೇಳಿದರು.
ಬಾರವಿ ಕನ್ನಡ ಅಭಿಮಾನಿಗಳ ಸಂಘದ ಸಂಚಾಲಕ ರವೀಂದ್ರ ಪ್ರಸಾದ್ ಮಾತನಾಡಿ, ಜೀವನದಿ ಕಾವೇರಿ ಮತ್ತು ಪರಿಸರದ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ. ಕಾವೇರಿ ನದಿಯ ಸ್ವಚ್ಛತೆ ಹಾಗೂ ಸಂರಕ್ಷಣೆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಕರಿಸಿ ಸ್ವಚ್ಛ ಪರಿಸರದ ಉಳಿವಿಗೆ ಸಹಕರಿಸುವಂತೆ ಮನವಿ ಮಾಡಿದರು.
ನಂತರ, ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಈ ವೇಳೆ ಬಾರವಿ ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಬಬೀಂದ್ರ ಪ್ರಸಾದ್, ಸಂಘಟನಾ ಸಂಚಾಲಕ ವಿಜಯೇಂದ್ರ ಪ್ರಸಾದ್ ಮುಖಂಡರಾದ ಆವರ್ತಿ ಸೋಮಶೇಖರ್, ಈ.ಟಿ.ಚಂದ್ರಣ್ಣ, ಶಂಕರ್, ತಿಲಕ್ಪುಜಾರಿ, ರಮೇಶ್ ಆವರ್ತಿ, ಮಣಿಯಣ್ಣ, ರುದ್ರೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.