ADVERTISEMENT

ಕೇಂದ್ರ ತಂಡ ಕೊಡಗಿಗೆ ಭೇಟಿ ನಾಳೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 13:27 IST
Last Updated 7 ಸೆಪ್ಟೆಂಬರ್ 2020, 13:27 IST
ಕೂಡಿಗೆ ಹೆಲಿಪ್ಯಾಡ್‌ಗೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಭೇಟಿ ನೀಡಿ ವೀಕ್ಷಿಸಿದರು
ಕೂಡಿಗೆ ಹೆಲಿಪ್ಯಾಡ್‌ಗೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಭೇಟಿ ನೀಡಿ ವೀಕ್ಷಿಸಿದರು   

ಮಡಿಕೇರಿ: ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಉಂಟಾದ ನಷ್ಟದ ಕುರಿತು ಅಧ್ಯಯನ ನಡೆಸಲು ಕೇಂದ್ರ ತಂಡವು ಸೆ.8ರಂದು ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದೆ.

ಕೇಂದ್ರ ತಂಡವು ಅಂದು ಬೆಳಿಗ್ಗೆ 9.30 ಗಂಟೆಗೆ ಕೂಡಿಗೆ ಸೈನಿಕ ಶಾಲೆಯ ಹೆಲಿಪ್ಯಾಡ್‍ಗೆ ಆಗಮಿಸಲಿದೆ. ನಂತರ, ಕೂಡಿಗೆ ಸೈನಿಕ ಶಾಲೆ ಸಭಾಂಗಣದಲ್ಲಿ ಕೇಂದ್ರದ ಅಧಿಕಾರಿಗಳು ಮಳೆ ಹಾನಿ ಬಗ್ಗೆ ಜಿಲ್ಲಾಡಳಿತದಿಂದ ಮಾಹಿತಿ ಪಡೆಯಲಿದ್ದಾರೆ.

11.30 ಗಂಟೆಗೆ ಕಡಗದಾಳು ಬಳಿಯ ಬೊಟ್ಲಪ್ಪ ಪೈಸಾರಿ ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ನಂತರ, ಮಧ್ಯಾಹ್ನ 2.15ಕ್ಕೆ ಚೇರಂಗಾಲ ಬಳಿ ಕರಿಮೆಣಸು ತೋಟ ಹಾನಿ ವೀಕ್ಷಣೆ ಮಾಡಲಿದ್ದಾರೆ. 2.45 ಗಂಟೆಗೆ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ನಂತರ 3.45 ಗಂಟೆಗೆ ಸೇತುವೆ ಹಾನಿ, ಭತ್ತ ಬೆಳೆ ಹಾನಿ ವೀಕ್ಷಣೆ ಮಾಡಲಿದ್ದಾರೆ. ನಂತರ, 4.15 ಗಂಟೆಗೆ ಚೇರಂಗಾಲ- ಕೋರಂಗಾಲ ರಸ್ತೆ ಸಂಪರ್ಕ ವೀಕ್ಷಣೆ ಮಾಡಲಿದ್ದಾರೆ. ಬಳಿಕ ಬೇಂಗೂರು ಬಳಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.

ADVERTISEMENT

ಕೇಂದ್ರ ತಂಡದಲ್ಲಿ ಭಾರತ ಸರ್ಕಾರದ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ಅವರ ನೇತೃತ್ವದಲ್ಲಿ ಅಧ್ಯಯನ ನಡೆಯಲಿದೆ. ಭಾರತ ಸರ್ಕಾರದ ವಿತ್ತ ಸಚಿವಾಲಯದ ಡಾ.ಭಾರ್ತೇಂದು ಕುಮಾರ್ ಸಿಂಗ್, ಕೆಎಸ್‌ಡಿಎಂಎ ಆಯುಕ್ತ ಮನೋಜ್ ರಂಜನ್ ಅವರು ತಂಡದಲ್ಲಿ ಇದ್ದಾರೆ.

ಪರಿಶೀಲನೆ: ಕೇಂದ್ರ ತಂಡ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ ಸಿಇಒ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಡಿವೈಎಸ್‍ಪಿ ಶೈಲೇಂದ್ರ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮದನ್ ಮೋಹನ್, ತಹಶೀಲ್ದಾರ್ ಗೋವಿಂದರಾಜು ಇತರರು ಕೂಡಿಗೆ ಸೈನಿಕ ಶಾಲೆಯಲ್ಲಿನ ಹೆಲಿಪ್ಯಾಡ್‍ಗೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.