
ನಾಪೋಕ್ಲು: ‘ಹದಿಹರೆಯದ ಮಕ್ಕಳು ದುಶ್ಚಟಕ್ಕೆ ಬಲಿಯಾಗಿ ಮಾರಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ’ ಎಂದು ಆಯುಷ್ಮಾನ್ ಇಲಾಖೆಯ ವೈದ್ಯ ಚಂದನ್ ಆತಂಕ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವಿರಾಜಪೇಟೆಯಿಂದ ಪಾರಾಣೆ ಗ್ರಾಮದ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಾದಕ ವಸ್ತುಗಳಾದ ಗುಟ್ಕಾ ಸೇವನೆ ಮದ್ಯಪಾನ, ಅಮಲು ಪದಾರ್ಥಗಳ ಸೇವನೆಯಿಂದ ಆರೋಗ್ಯಕ್ಕೆ ಮಾತ್ರವಲ್ಲ, ನಮ್ಮ ಪರಿವಾರಕ್ಕೂ ಹಾನಿಯನ್ನು ಉಂಟುಮಾಡುತ್ತದೆ. ಒಂದು ವೇಳೆ ಯಾರಾದರೂ ಮಕ್ಕಳು ವ್ಯಸನಕ್ಕೆ ಒಳಗಾದಲ್ಲಿ ಅಥವಾ ಅಮಲು ಪದಾರ್ಥಗಳ ಸೇವನೆಯನ್ನು ಕಂಡಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ’ ಎಂದು ತಿಳಿಸಿದರು.
ವಲಯ ಮೇಲ್ವಿಚಾರಕ ಪ್ರತಾಪ್ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹಾಗೂ ಕಲಿಕೆಯ ಮೇಲಿನ ನಿಯಂತ್ರಣ ತಪ್ಪುತ್ತಿದೆ. ಇದು ಅವರ ಭವಿಷ್ಯಕ್ಕೆ ಮಾರಕವಾಗಿದೆ. ಮಾದಕ ವಸ್ತು ಸೇವನೆಯಿಂದ ಆಗುವ ಆರೋಗ್ಯ ಸಮಸ್ಯೆ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ಗೆ ಒಳಗಾದ ಜನರ ಪರಿಸ್ಥಿತಿಯನ್ನು ವಿವರಿಸಿ ಮಾದಕ ವಸ್ತು ಮುಕ್ತ ವಿದ್ಯಾರ್ಥಿ ಜೀವನ ನಮ್ಮದಾಗಲಿ’ ಎಂದು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರಜನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲೆಯ ಸಹಶಿಕ್ಷಕ ಮಹಾದೇವ್, ವಲಯ ಮೇಲ್ವಿಚಾರಕ ಪ್ರತಾಪ್ ದೇವಾಡಿಗ, ಸೇವಾ ಪ್ರತಿನಿಧಿ ಸಾವಿತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.