ADVERTISEMENT

ಕೊರೊನ ವೈರ್‌ ಜಾಗೃತಿ ಅಗತ್ಯ: ಸಿ.ಎಲ್. ವಿಶ್ವ

ಗ್ರಾಮಪಂಚಾಯಿತಿ ಕೆಡಿಪಿ ಸಭೆಯಲ್ಲಿ ಸಭೆ ಅಧ್ಯಕ್ಷ ವಿಶ್ವ

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 14:02 IST
Last Updated 5 ಜನವರಿ 2024, 14:02 IST
ಕುಶಾಲನಗರ ಸಮೀಪದ ನಂಜರಾಯಪಟ್ಟಣ ಗ್ರಾಮಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ತ್ರೈಮಾಸಿಕ‌ ಸಭೆಯಲ್ಲಿ ಪಂಚಾಯತಿ ಅಧ್ಯಕ್ಷ ಸಿ.ಎಲ್.ವಿಶ್ವ ಮಾತನಾಡಿದರು.ಗ್ರಾಪಂ ಉಪಾಧ್ಯಕ್ಷೆ ಕುಸುಮ,ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.
ಕುಶಾಲನಗರ ಸಮೀಪದ ನಂಜರಾಯಪಟ್ಟಣ ಗ್ರಾಮಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ತ್ರೈಮಾಸಿಕ‌ ಸಭೆಯಲ್ಲಿ ಪಂಚಾಯತಿ ಅಧ್ಯಕ್ಷ ಸಿ.ಎಲ್.ವಿಶ್ವ ಮಾತನಾಡಿದರು.ಗ್ರಾಪಂ ಉಪಾಧ್ಯಕ್ಷೆ ಕುಸುಮ,ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.   

ಕುಶಾಲನಗರ: ನಂಜರಾಯಪಟ್ಟಣ ಗ್ರಾಮಪಂಚಾಯಿತಿ ವ್ಯಾಪ್ತಿಯ ಪ್ರಮುಖ ಪ್ರವಾಸಿ ತಾಣ ದುಬಾರೆ ಸಾಕಾನೆ ಶಿಬಿರದಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆ ಕೊರೊನಾ ರೂಪಾಂತರಿ ಜೆಎನ್.1 ಬಗ್ಗೆ ಜಾಗೃತಿ ಮೂಡಿಸುವುದು, ನಿಯಂತ್ರಣ ಕ್ರಮ ಹೆಚ್ಚಿಸಬೇಕು ಎಂದು ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ತಿಳಿಸಿದರು.

ಈಚೆಗೆ ನಡೆದ ತ್ರೈಮಾಸಿಕ‌ ಕೆಡಿಪಿ ಸಭೆಯ  ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮದಲ್ಲಿ ನಿರಂತರ ಕಾಡಾನೆ, ಹುಲಿ ಹಾವಳಿ‌ ಇದೆ.  ಅರಣ್ಯ ಇಲಾಖೆ ಎಚ್ಚರಿಕೆ ಕ್ರಮ ವಹಿಸುವಂತೆ ಅಧಿಕಾರಿಗೆ ಸೂಚಿಸಿದರು.  ಕಾಡಾನೆ ಹಾವಳಿ ತಡೆಗಟ್ಟಲು ಅಳವಡಿಸಿದ್ದ ರೈಲ್ವೇ ಬ್ಯಾರಿಕೇಡ್ ಹಲವು ಕಡೆ ಹಾನಿಯಾಗಿದೆ, ಸೋಲಾರ್ ಬೇಲಿ ಸ್ಥಾಪಿಸುವ ಬಗ್ಗೆ ಗಮನಹರಿಸಬೇಕು ಎಂದರು.

ADVERTISEMENT

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡಿ ನಿವಾಸಿಗಳಿಗೆ ಸೆಸ್ಕ್‌ನಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಲು ಕ್ರಮವಹಿಸಬೇಕಿದೆ. ಜಂಗಲ್ ಕಟ್ಟಿಂಗ್ ಮೂಲಕ ಸಂಭಾವ್ಯ ವಿದ್ಯುತ್ ಅವಘಡ ತಪ್ಪಿಸಲು ಸೂಚಿಸಿದರು.

ಜಾನುವಾರುಗಳ ಚಿಕಿತ್ಸೆ, ಸ್ಮಶಾನ, ಕೆರೆಗಳಿಗೆ ದಾರಿ ಸಮಸ್ಯೆ, ಮಳೆಹಾನಿ ಪರಿಹಾರ ಧನ ವಿಳಂಬ, ವೈರಸ್ ಹಾವಳಿ ತಡೆ ಕ್ರಮಗಳ ಬಗ್ಗೆ, ಪಡಿತರ ಚೀಟಿ, ಗೃಹಲಕ್ಷ್ಮಿ ಯೋಜನೆ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ವಿವಿಧ ಇಲಾಖೆ ಅಧಿಕಾರಿಗಳು ಇಲಾಖೆಯಿಂದ ಸಿಗುವ ಜನರಿಗೆ ಸೌಲಭ್ಯಗಳ ಮಾಹಿತಿ ನೀಡಿದರು. ಅಭಿವೃದ್ಧಿ ಕಾರ್ಯಗಳ ಬಗ್ಗೆ  ಸದಸ್ಯರು ಚರ್ಚಿಸಿದರು. ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಸಮೀರ, ಮಾವಾಜಿ ರಕ್ಷಿತ್, ಜಾಜಿ ತಮ್ಮಯ್ಯ ಪಿಡಿಒ ರಾಜಶೇಖರ್, ಕಾರ್ಯದರ್ಶಿ ಶೇಷಗಿರಿ ಭಾಗವಹಿಸಿದ್ದರು.

‘ತಾತ್ಕಾಲಿಕ ಸೇತುವೆ ಬೋಟ್‌’:

ದುಬಾರೆಯಲ್ಲಿ ತೂಗುಸೇತುವೆಯಿಲ್ಲದೆ ನದಿ ದಾಟುವ ಪ್ರವಾಸಿಗರ ಜೀವಕ್ಕೆ ಸುರಕ್ಷತೆಯಿಲ್ಲದಂತಾಗಿದೆ. ತೂಗುಸೇತುವೆ ನಿರ್ಮಾಣಕ್ಕೆ ಅರಣ್ಯ ಇಲಾಖೆ‌ ಮನಸ್ಸು‌ ಮಾಡುತ್ತಿಲ್ಲ. ಪಂಚಾಯಿತಿ ವತಿಯಿಂದ ಪಾರ್ಕಿಂಗ್ ಶೌಚಾಲಯ ಮತ್ತಿತರ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಲಾಗಿದೆ. ನದಿ ದಾಟುವ ಪ್ರವಾಸಿಗರ ಕಾಲು ಜಾರಿ‌ ಬಿದ್ದು ಹಾನಿ‌ ಮಾಡಿಕೊಳ್ಳುತ್ತಿದ್ದಾರೆ. ಈ ಸಂಬಂಧ ಪ್ರವಾಸಿಗರು ಸಾರ್ವಜನಿಕರು ಗ್ರಾಪಂ ಮೇಲೆ ಆರೋಪ ಮಾಡುತ್ತಿದ್ದಾರೆ.  ಅರಣ್ಯ ಇಲಾಖೆ ಗಮನಹರಿಸಿ ತೂಗುಸೇತುವೆ ನಿರ್ಮಾಣ ಮಾಡುವವರೆಗೆ ಪರ್ಯಾಯ ತಾತ್ಕಾಲಿಕ ಸೇತುವೆ ವ್ಯವಸ್ಥೆ ಕಲ್ಪಿಸಬೇಕು. ಎರಡು ಮೋಟಾರ್ ಬೋಟ್ ಖರೀದಿಗೆ ಪಂಚಾಯಿತಿ ತೀರ್ಮಾನಿಸಿದೆ ಎಂದು ಅಧ್ಯಕ್ಷ ವಿಶ್ವ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.