ಗೋಣಿಕೊಪ್ಪಲು: ನನ್ನದು ಹುಣಸೂರು ತಾಲ್ಲೂಕಿನ ಕೂಡ್ಲೂರು ಹೊಸೂರು. ಕೋವಿಡ್ ಕೆಲಸ ಮಾಡುತ್ತಿರುವುದರಿಂದ ಅದು ಮುಗಿಯುವವರೆಗೆ ಊರಿಗೆ ಬರಬೇಡಿ; ಬಂದು ಊರಿನವರಿಗೆಲ್ಲ ರೋಗ ಅಂಟಿಸಬೇಡಿ ಎಂದು ಊರಿನವರೆಲ್ಲ ಹೇಳುತ್ತಿದ್ದಾರೆ. ನನಗೆ 2 ತಿಂಗಳ ಮಗನಿದ್ದಾನೆ. ಮಗುವನ್ನೂ ನೋಡಲು ಸಾಧ್ಯವಾಗುತ್ತಿಲ್ಲ.
ಇದು ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪುರುಷ ಆರೋಗ್ಯ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿರುವ ಮಂಜು ಅವರ ನೋವಿನ ನುಡಿ.
ನಾನು ಕೆಲಸ ನಿರ್ವಹಿಸುತ್ತಿರುವ ಮಾಯಮುಡಿ, ಕೋಣನಕಟ್ಟೆ ಭಾಗದಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳಿವೆ. ಈ ಗ್ರಾಮಗಳಲ್ಲಿ ಮನೆ ಮನೆಗೆ ಹೋಗಿ ಗಂಟಲು ದ್ರವ ತೆಗೆಯುತ್ತಿದ್ದೇನೆ. ಈ ಸಂದರ್ಭದಲ್ಲಿ ಧರಿಸುವ ಪಿ.ಪಿ.ಇ. ಕಿಟ್ ಸುಸ್ತು ಮಾಡುತ್ತದೆ. ಬೆವರಿ ನೀರಿಳಿದರೂ ಒರೆಸಿಕೊಳ್ಳಲಾಗುವುದಿಲ್ಲ. ಬಾಯಾರಿಕೆಯಾದರೂ ನೀರು ಕುಡಿಯುವಂತಿಲ್ಲ.
ಕ್ವಾರಂಟೈನ್ ಆದವರಿಗೆ ಮನೆಯಲ್ಲಿ ಸೌಲಭ್ಯ ಇಲ್ಲದಿದ್ದರೆ ಕೋವಿಡ್ ಸೆಂಟರ್ ಕಳಿಸುತ್ತೇವೆ. ಗಂಭೀರವಾದವರನ್ನು ಕೋವಿಡ್ ಆಸ್ಪತ್ರೆಗೆ ಕಳಿಸಲಾಗುವುದು. ಅಲ್ಲಿ ಬೆಡ್ ಸಿಗದಿದ್ದರೆ ಮರಳಿ ನನಗೆ ಫೋನ್ ಮಾಡಿ ಬೈಯುತ್ತಾರೆ. ನೀವು ಕಳಿಸಿಕೊಟ್ಟಿರಿ. ಇಲ್ಲಿ ಬೆಡ್ ಇಲ್ಲ ಎಂದು ಕೇಳುತ್ತಾರೆ. ಅವರ ಸಂಬಂಧಿಕರು ಮತ್ತಷ್ಟು ಕೋಪ ಮಾಡಿಕೊಳ್ಳುತ್ತಾರೆ. ಇದನ್ನೆಲ್ಲ ಸಹಿಸಿಕೊಂಡು ಕೆಲಸ ಮಾಡುತ್ತಿದ್ದೇನೆ.
ಚೆನ್ನಂಗೊಲ್ಲಿಯಲ್ಲಿ ಒಂದೇ ದಿನದಲ್ಲಿ 29 ಜನರಿಗೆ ದ್ರವ ಪರೀಕ್ಷೆ ಮಾಡಲಾಯಿತು. ಇವರಲ್ಲಿ 15 ಜನರಿಗೆ ಸೋಂಕು ದೃಢಪಟ್ಟಿದೆ. ಇದೀಗ ಬಹಳ ಮಂದಿ ಸ್ವಯಂ ವಿವೇಚನೆಯಿಂದ ಗಂಟಲು ದ್ರವ ಪರೀಕ್ಷಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಇದರಿಂದ ಪ್ರಕರಣ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ.
ನಿರೂಪಣೆ: ಜೆ.ಸೋಮಣ್ಣ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.