ಮಡಿಕೇರಿ: ‘ಸಿ.ಪಿ.ಯೋಗೇಶ್ವರ್ ಅವರನ್ನು ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಿರುವುದು ಕಾನೂನು ಬಾಹಿರ. ಅವರ ನಾಮ ನಿರ್ದೇಶನವನ್ನು ತಕ್ಷಣವೇ ಹಿಂಪಡೆಯಬೇಕು’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮಾಹಿತಿ ಹಕ್ಕು ಹಾಗೂ ಕಾನೂನು ಘಟಕದ ರಾಜ್ಯ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಇಲ್ಲಿ ಶುಕ್ರವಾರ ಆಗ್ರಹಿಸಿದರು.
‘ರಾಜ್ಯಪಾಲರ ಭೇಟಿಗೆ ಅವಕಾಶ ಕೋರಲಾಗಿತ್ತು. ಸ್ಪಂದನೆ ಸಿಕ್ಕಿಲ್ಲ. ಯಾವ ಮಾನದಂಡಗಳ ಅಡಿ ಯೋಗೇಶ್ವರ್ ನೇಮಕವಾಗಿದೆ ಎಂಬುದನ್ನು ತಿಳಿಸುವಂತೆ ಮುಖ್ಯ ಕಾರ್ಯದರ್ಶಿಗೂ ಪತ್ರ ಬರೆಯಲಾಗಿತ್ತು. ಅದಕ್ಕೂ ಪ್ರತಿಕ್ರಿಯೆ ಸಿಕ್ಕಿಲ್ಲ’ ಎಂದು ಪೊನ್ನಣ್ಣ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಮೆಗಾ ಸಿಟಿ ರಿಯಲ್ ಎಸ್ಟೇಟ್ ಯೋಜನೆ ಅಡಿ ಸಾರ್ವಜನಿಕರಿಂದ ಹಣ ಪಡೆದು ನಿವೇಶನ ವಿತರಿಸಿದೆ ವಂಚಿಸಿರುವ ಆರೋಪ ಯೋಗೇಶ್ವರ್ ಮೇಲಿದೆ. ಅವರು ಬಹುಕೋಟಿ ಹಗರಣದ ರೂವಾರಿ. ಕೇಂದ್ರ ಸರ್ಕಾರವೇ ಸ್ಥಾಪಿಸಿರುವ ತನಿಖಾ ಸಂಸ್ಥೆ ತನಿಖೆ ನಡೆಸಿ, ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ಯೋಗೇಶ್ವರ್ ಈಗಲೂ ವಿಚಾರಣೆಗೆ ನ್ಯಾಯಾಲಯಕ್ಕೆ ಹೋಗುತ್ತಿದ್ದಾರೆ. ಇಂತಹ ವ್ಯಕ್ತಿಯ ನಾಮ ನಿರ್ದೇಶನ ಸಂವಿಧಾನಕ್ಕೆ ಎಸಗಿರುವ ಘೋರ ಅಪಚಾರ’ ಎಂದು ಹೇಳಿದರು.
‘ವಿಜ್ಞಾನ, ಕಲೆ, ಸಾಹಿತ್ಯ ಕ್ಷೇತ್ರದ ಸಾಧಕರನ್ನು ನಾಮ ನಿರ್ದೇಶನ ಮಾಡಬೇಕು. ಯೋಗೇಶ್ವರ್ಗೆ ಯಾವುದೇ ಅರ್ಹತೆಯಿಲ್ಲ’ ಎಂದು ತಿಳಿಸಿದರು.
‘ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಪ್ರಮುಖ ಪಾತ್ರ ವಹಿಸಿದ್ದ ಯೋಗೇಶ್ವರ್ಗೆ ಬಿಜೆಪಿಯು ಪರಿಷತ್ ಸ್ಥಾನವನ್ನು ಕೊಡುಗೆ ನೀಡಿದೆ. ರಾಜ್ಯಪಾಲರು ಅರ್ಹತೆ ಪರಿಶೀಲಿಸಬೇಕಿತ್ತು. ಯೋಗೇಶ್ವರ್ ಅವರನ್ನು ವಜಾಗೊಳಿಸದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಪೊನ್ನಣ್ಣ ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.