ADVERTISEMENT

ಮಡಿಕೇರಿ: ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಗೆ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 13:19 IST
Last Updated 9 ಆಗಸ್ಟ್ 2022, 13:19 IST
ಮಡಿಕೇರಿ: ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಗೆ ಆಗ್ರಹಿಸಿ ಧರಣಿ
ಮಡಿಕೇರಿ: ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಗೆ ಆಗ್ರಹಿಸಿ ಧರಣಿ   

ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್‌ನ ಕಾರ್ಯಕರ್ತರು ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಕೊಡಗು ಜಿಲ್ಲೆಗೆ ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ನೀಡಬೇಕು ಎಂದು ಆಗ್ರಹಿಸಿದರು.

ವಿಶ್ವ ಆದಿಮಸಂಜಾತ ಮೂಲವಂಶಸ್ಥ ಸಮುದಾಯದ ಹಕ್ಕುಗಳ ಅಂತರರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಇಲ್ಲಿ ಸುರಿಯುವ ಮಳೆಯಲ್ಲೂ ಸೇರಿದ ಅವರು ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಕೌನ್ಸಿಲ್‌ನ ಅಧ್ಯಕ್ಷ ಎನ್.ಯು.ನಾಚಪ್ಪ, ‘ಭಾರತದ ಈಶಾನ್ಯ ರಾಜ್ಯಗಳಲ್ಲಿ 10 ಸ್ವಾಯತ್ತ ಪ್ರದೇಶಗಳಂತೆ ಕೊಡಗಿಗೂ ಸ್ವಾಯತ್ತತೆ ನೀಡಬೇಕು ಹಾಗೂ ಕೊಡವರನ್ನು ಎಸ್.ಟಿ. ಪಟ್ಟಿಗೆ ಸೇರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಕೊಡವ ಕುಲದ ಧಾರ್ಮಿಕ ಸಂಸ್ಕಾರವಾದ ಕೋವಿ, ತೋಕ್, ಶಸ್ತ್ರಾಸ್ತ್ರ ಹಕ್ಕನ್ನು ಸಿಖ್ ಸಮುದಾಯದ ಕಿರ್ಪಾಣ್ ಮಾದರಿಯಲ್ಲಿ ಪರಿಗಣಿಸಿ, ಸಂವಿಧಾನದ 25 ಮತ್ತು 26ನೇ ವಿಧಿಯನ್ವಯ ವಿಶೇಷ ಖಾತರಿ ನೀಡಬೇಕು. ಕೊಡವ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವಸಂಸ್ಥೆಯ ಯುನೆಸ್ಕೊದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಯಲ್ಲಿ ಸೇರಿಸಬೇಕು’ ಎಂದು ಆಗ್ರಹಿಸಿದರು.

ಕಾವೇರಿ ಉದ್ಭವಿಸುವ ಸ್ಥಳವನ್ನು ಕೊಡವರ ಪ್ರಧಾನ ತೀರ್ಥಕ್ಷೇತ್ರವೆಂದು ಪರಿಗಣಿಸಿ, ಅಧಿಕೃತ ಸ್ಥಾನಮಾನ ನೀಡಬೇಕು. ಕೊಡಗಿನ ದೇವಾಟ್‍ಪರಂಬ್ ನರಮೇಧ ದುರಂತ ಮತ್ತು ನಾಲ್ನಾಡ್ ಅರಮನೆ-ಮಡಿಕೇರಿ ಕೋಟೆಗಳಲ್ಲಿ 1633ರಿಂದ 1834ರತನಕ ಅರಮನೆ ಪಿತೂರಿಯಲ್ಲಿ ನಡೆದ ಕೊಡವರ ಬರ್ಬರ ರಾಜಕೀಯ ಹತ್ಯಾಕಾಂಡಗಳ ನೆನಪಿಗಾಗಿ ಅಂತರರರಾಷ್ಟ್ರೀಯ ಸ್ಮಾರಕ ನಿರ್ಮಿಸಬೇಕು ಎಂದು ಹೇಳಿದರು.

ಈ ಕುರಿತ ಮನವಿ ಪತ್ರವನ್ನು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಗೃಹಮಂತ್ರಿ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಯುನೆಸ್ಕೋದ ನಿರ್ದೇಶಕ, ವಿಶ್ವ ರಾಷ್ಟ್ರಸಂಸ್ಥೆಯ ಹೈಕಮೀಷನರ್‌, ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ, ಕರ್ನಾಟಕದ ಮುಖ್ಯಮಂತ್ರಿ ಅವರಿಗೆ ಕಳುಹಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.