ADVERTISEMENT

ಕೊಳಲ ನಾದಕ್ಕೆ ಭಕ್ತರ ಹರ್ಷೋದ್ಗಾರ

ನಾಪೋಕ್ಲು ಸಮೀಪದ ಅಯ್ಯಂಗೇರಿಯಲ್ಲಿ ಭಾನುವಾರ ಚಿನ್ನತಪ್ಪ ಉತ್ಸವದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 5:28 IST
Last Updated 8 ಮಾರ್ಚ್ 2021, 5:28 IST
ನಾಪೋಕ್ಲು ಸಮೀಪದ ಅಯ್ಯಂಗೇರಿ ಗ್ರಾಮದಲ್ಲಿ ಚಿನ್ನತಪ್ಪ ಉತ್ಸವದ ಅಂಗವಾಗಿ ಭಾನುವಾರ ‘ಶ್ರೀ ಕೃಷ್ಣನ ಕೊಳಲ’ನ್ನು ಮೆರವಣಿಗೆಯಲ್ಲಿ ತರಲಾಯಿತು (ಎಡಚಿತ್ರ). ಎತ್ತು ಪೋರಾಟ ನಡೆಸಲಾಯಿತು
ನಾಪೋಕ್ಲು ಸಮೀಪದ ಅಯ್ಯಂಗೇರಿ ಗ್ರಾಮದಲ್ಲಿ ಚಿನ್ನತಪ್ಪ ಉತ್ಸವದ ಅಂಗವಾಗಿ ಭಾನುವಾರ ‘ಶ್ರೀ ಕೃಷ್ಣನ ಕೊಳಲ’ನ್ನು ಮೆರವಣಿಗೆಯಲ್ಲಿ ತರಲಾಯಿತು (ಎಡಚಿತ್ರ). ಎತ್ತು ಪೋರಾಟ ನಡೆಸಲಾಯಿತು   

ನಾಪೋಕ್ಲು: ಸಮೀಪದ ಅಯ್ಯಂಗೇರಿ ಗ್ರಾಮದಲ್ಲಿ ಗೊಲ್ಲ ಸಮುದಾಯದವರು ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವ ಚಿನ್ನತಪ್ಪ ಉತ್ಸವ ಭಾನುವಾರ ಶ್ರದ್ಧಾಭಕ್ತಿಯಿಂದ ಜರುಗಿತು.

ಉತ್ಸವಕ್ಕೆ ವಿವಿಧ ಭಾಗಗಳಿಂದ ಭಕ್ತರು ಪಾಲ್ಗೊಂಡು ‘ಶ್ರೀ ಕೃಷ್ಣನ ಕೊಳಲಿ’ನ ನಾದವನ್ನು ಆಲಿಸಿದರು. ದೇವಾಲಯದಲ್ಲಿ ಹರಕೆ, ಪೂಜೆ ಸಲ್ಲಿಸಿದರು.

ವಾರ್ಷಿಕ ಉತ್ಸವಶನಿವಾರ ಬೆಳಿಗ್ಗೆ ಆರಂಭಗೊಂಡಿತು. ಸೂರ್ಯಾಸ್ತ ವಾಗುತ್ತಿದ್ದಂತೆ ಸಮೀಪದ ಕಲ್ಲುಹೊಳೆಗೆ ತೆರಳಿದ ಭಕ್ತರು ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ADVERTISEMENT

ಭಾನುವಾರ ಮಧ್ಯಾಹ್ನ 1.15ಕ್ಕೆ ದೇವಾಲಯದಿಂದ ಶ್ರೀಕೃಷ್ಣನದ್ದು ಎಂದು ನಂಬಲಾಗಿರುವ ಕೊಳಲನ್ನು ಹೊರ ತೆಗೆಯಲಾಯಿತು. ಹಬ್ಬಕ್ಕೆ ನಿಗದಿಪಡಿಸಿದ ಕುಟುಂಬದ ಹಿರಿಯರಾದ ಬಿದ್ದಿಯಂಡ ಹರೀಶ್ ಕೊಳಲನ್ನು ಹಿಡಿದು ನಿರ್ದಿಷ್ಟ ಸ್ಥಳಗಳಲ್ಲಿ ಮೂರು ಬಾರಿ ನುಡಿಸುತ್ತಾ ಊರ ಮಂದ್‌ಗೆ ಆಗಮಿಸಿದರು. ಅಶ್ವತ್ಥ ವೃಕ್ಷದ ಕೆಳಗೆ ಕೊಳಲು ನುಡಿಸಲಾಯಿತು. ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಇದೇ ಸಂದರ್ಭ ನಾಳಿಯಂಡ ಮಾನಿ ಎಂಬಲ್ಲಿಂದ ಎತ್ತುಪೋರಾಟದೊಂದಿಗೆ ಹೊರಟ ಶ್ವೇತ ವಸ್ತ್ರ ಧರಿಸಿದ ಮಹಿಳೆಯರು ಚೆಂಬುಚೆರ್ಕ್ ಹೊತ್ತು ಊರಮಂದ್‌ಗೆ ಆಗಮಿಸಿದರು. ಊರಮಂದ್ ಗದ್ದೆಯಲ್ಲಿ ಮೂರು ಸುತ್ತು ಎತ್ತು ಪೋರಾಟ ನಡೆಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಹಬ್ಬದ ಕಟ್ಟು ಸಡಿಲಿಸಲಾಯಿತು.

ತಪ್ಪಡ್ಕ ಸಲ್ಲಿಸಿದ ಬಳಿಕ ಶುದ್ಧ ಮುದ್ರಿಕೆಯವರನ್ನು ಮೀನಿಗೆ ಅಕ್ಕಿ ಹಾಕಲು ಆಹ್ವಾನಿಸಲಾಯಿತು. ಧಾರಾ ಪೂಜೆ ನಡೆದ ಸ್ಥಳಕ್ಕೆ ತೆರಳಿದ ಕುಟುಂಬಸ್ಥರು ಮೀನಿಗೆ ಅಕ್ಕಿ ಹಾಕಿದ ಬಳಿಕ ದೇವಾಲಯಕ್ಕೆ ತೆರಳುವುದರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು.

ಉತ್ಸವದಲ್ಲಿ ಗೊಲ್ಲ ಸಮುದಾಯದ ಬಾಂಧವರೊಂದಿಗೆ ಗ್ರಾಮದ 12 ಕುಲದವರು ಭಾಗಿಯಾಗಿದ್ದರು. ಉತ್ಸವದಲ್ಲಿ ತಕ್ಕರಾಗಿ ಬಿದ್ದಿಯಂಡ ಸುಭಾಷ್ ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.