ಮಡಿಕೇರಿ: ‘ತಾಯಿ ಮತ್ತು ತಾಯಿ ನಾಡು ಸ್ವರ್ಗಕ್ಕಿಂತ ಹೆಚ್ಚು’ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ.ಬಿ.ರಾಘವ ಪ್ರತಿಪಾದಿಸಿದರು.
ಇಲ್ಲಿ ಲೇಖಕಿ ತೆನ್ನೀರ ಟೀನಾ ಚಂಗಪ್ಪ ಅವರ ‘ಮಣ್ಣ್ರ ಋಣ’ (ಮಣ್ಣಿನ ಋಣ) ಕೃತಿಯನ್ನು ನಿವೃತ್ತ ಪ್ರಾಂಶುಪಾಲರಾದ ಡಾ.ಬೊಜ್ಜಂಗಡ ಅವನಿಜ ಸೋಮಯ್ಯ ಇಲ್ಲಿನ ಪತ್ರಿಕಾಭವನದಲ್ಲಿ ಶನಿವಾರ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಬಿ.ರಾಘವ, ‘ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಯಾರೂ ಮರೆಯಬಾರದು. ನಾಡು ಬಿಟ್ಟು ಹೋದರೆ ಹೇಗೆಲ್ಲ ಕಷ್ಟಪಡಬೇಕು ಮತ್ತು ಅವಿಭಕ್ತ ಕುಟುಂಬ ಹೇಗೆ ವಿಭಕ್ತ ಕುಟುಂಬವಾಗುತ್ತದೆ ಎಂಬುದರ ಬಗ್ಗೆ ಲೇಖಕಿ ತೆನ್ನೀರ ಟೀನಾ ಚಂಗಪ್ಪ ಉತ್ತಮವಾಗಿ ವಿವರಿಸಿದ್ದಾರೆ’ ಎಂದು ತಿಳಿಸಿದರು.
ಪುಸ್ತಕದ ಲೇಖಕಿ ತೆನ್ನೀರ ಟೀನಾ ಚಂಗಪ್ಪ, ‘ಇದು ನನ್ನ 2ನೇ ಪುಸ್ತಕವಾಗಿದ್ದು, ನಾನು ಕೇಳಿದ ಮತ್ತು ನೋಡಿದ ಅಭಿಪ್ರಾಯ, ಅನುಭವ, ಕಷ್ಟ-ಸುಖಗಳನ್ನು ಆಧಾರವಾಗಿಟ್ಟುಕೊಂಡು ಅದಕ್ಕೆ ಕಥೆಯ ರೂಪವನ್ನು ನೀಡಿದ್ದೇನೆ’ ಎಂದು ತಿಳಿಸಿದರು.
‘ಕೊಡವ ಮಕ್ಕಡ ಕೂಟ ನನ್ನ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಲು ಸಹಕರಿಸಿದ್ದು, ಹೊಸ ಬರಹಗಾರರನ್ನು ಪ್ರೋತ್ಸಾಹಿಸುತ್ತಾ ಬರುತ್ತಿದೆ’ ಎಂದು ಶ್ಲಾಘಿಸಿದರು.
ಪ್ರಕಾಶಕ ಹಾಗೂ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ‘ಕೂಟದ ಮೂಲಕ ಕೊಡವ ಸಂಸ್ಕೃತಿಯ ಬಗ್ಗೆ ಯುವಜನತೆಯಲ್ಲಿ ನಿರಂತರವಾಗಿ ಜಾಗೃತಿ ಹಾಗೂ ಆಸಕ್ತಿಯನ್ನು ಮೂಡಿಸುತ್ತಾ ಬರಲಾಗುತ್ತಿದೆ’ ಎಂದು ಹೇಳಿದರು.
ನಿವೃತ್ತ ಮುಖ್ಯೋಪಾಧ್ಯಾಯಿನಿ ತೆನ್ನೀರ ಡಾಟಿ ಗಣೇಶ್, ಬೊಟ್ಟೊಳಂಡ ನಿವ್ಯ ದೇವಯ್ಯ, ಐಚಂಡ ರಶ್ಮಿ ಮೇದಪ್ಪ, ಉಡುವೆರ ರೇಖಾ ರಘು, ಕುಳುವಂಡ ಶೃತಿ ಪೂಣಚ್ಚ, ಪೆಬ್ಬಟ್ಟಿರ ಶೀತಲ್ ಕಾರ್ಯಪ್ಪ, ಪೇರಿಯಂಡ ಯಶೋಧಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.