ADVERTISEMENT

ವೈಜ್ಞಾನಿಕ ಭರಾಟೆಯಲ್ಲಿ ಕಳೆದು ಹೋಗುತ್ತಿದೆ ಕ್ರೀಡೆ: ಪರಿವೀಕ್ಷಕಿ ಸುಕುಮಾರಿ

ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 6:01 IST
Last Updated 28 ಆಗಸ್ಟ್ 2024, 6:01 IST
ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮದಲ್ಲಿ ತಾಲ್ಲೂಕು ದೈಹಿಕ ಶಿಕ್ಷಣಾ ಇಲಾಖೆಯ ಪರಿವೀಕ್ಷಕಿ ಸುಕುಮಾರಿ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ  ಹಾರೈಸಿದರು. 
ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮದಲ್ಲಿ ತಾಲ್ಲೂಕು ದೈಹಿಕ ಶಿಕ್ಷಣಾ ಇಲಾಖೆಯ ಪರಿವೀಕ್ಷಕಿ ಸುಕುಮಾರಿ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ  ಹಾರೈಸಿದರು.    

ಶನಿವಾರಸಂತೆ: ‘ಇಂದಿನ ವೈಜ್ಞಾನಿಕ ಭರಾಟೆಯಲ್ಲಿ ಕ್ರೀಡೆಯ ಮಹತ್ವವನ್ನು ಕಳೆದುಕೊಳ್ಳುತ್ತಿದ್ದೇವೆ. ಸ್ಪೂರ್ತಿದಾಯಕವಾದ ಕ್ರೀಡಾ ಕ್ಷೇತ್ರವನ್ನು ಮುನ್ನಡೆಸಲು ಶಾಲಾ ಕಾಲೇಜು ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು’ ಎಂದು ತಾಲ್ಲೂಕು ದೈಹಿಕ ಶಿಕ್ಷಣ ಇಲಾಖೆಯ ಪರಿವೀಕ್ಷಕಿ ಸುಕುಮಾರಿ ಹೇಳಿದರು.

ಆಲೂರು ಸಿದ್ದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಗ್ರಾಮೀಣ ಕ್ರೀಡಾಂಗಣದಲ್ಲಿ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಧಿಕಾರಿ ಕಚೇರಿ ಹಾಗೂ ಆಲೂರುಸಿದ್ದಾಪುರ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದಿಂದ ಹಮ್ಮಿಕೊಂಡಿರುವ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ಶನಿವಾರಸಂತೆ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಆಲೂರುಸಿದ್ದಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, ‘ವ್ಯಕ್ತಿಯ ಸದೃಢವಾದ ಮಾನಸಿಕ ಮತ್ತು ದೈಹಿಕ ಆರೋಗ್ಯ ಬೆಳವಣಿಗೆಗೆ ಕ್ರೀಡೆಯು ಪೂರಕ ಶಕ್ತಿಯಾಗಿದೆ’ ಎಂದು ಅಭಿಪ್ರಾಯ‌ಪಟ್ಟರು.

ADVERTISEMENT

ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಬೆಳವಣಿಗೆ ಮತ್ತು ಕ್ರೀಡಾ ಕ್ಷೇತ್ರದ ಬೆಳವಣಿಗೆಗಾಗಿ ಕ್ರೀಡಾಕೂಟಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಿಕೊಂಡು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು ಎಂದರು.

ಕ್ರೀಡಾಕೂಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ಸೋಲು ಗೆಲುವುಗಳನ್ನು ಸಮವಾಗಿ ಸ್ವೀಕರಿಸಿ ಈ ಮೂಲಕ ಉತ್ತಮವಾಗಿ ಪ್ರದರ್ಶನ ನೀಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಆಲೂರುಸಿದ್ದಾಪುರ ಪಿಡಿಒ ಹರೀಶ್‍ ಮಾತನಾಡಿ, ‘ಪೋಷಕರು ತಮ್ಮ ಮಕ್ಕಳು ಉನ್ನತ್ತ ಅಧಿಕಾರಿಗಳಾಗಬೇಕೆಂದು ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಕ್ರೀಡೆಯ ಬಗ್ಗೆ ತಾತ್ಸಾರ ಮನೋಭಾವನೆಯಿಂದ ಇಂದು ನಮ್ಮ ದೇಶ ಒಲಿಪಿಂಕ್ ಮತ್ತು ವಿಶ್ವ ಮಟ್ಟದ ಕ್ರೀಡಾಕೂಟದಲ್ಲಿ ದೇಶಕ್ಕೆ ಚಿನ್ನದ ಪದಕವನ್ನು ತಂದುಕೊಡಲು ತುಂಬಾ ಕಷ್ಟ ಪಡುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಜಿ.ಎಂ.ಹೇಮಂತ್, ಆಲೂರುಸಿದ್ದಾಪುರ ಮೊರಾರ್ಜಿ ವಸತಿ ಶಾಲಾ ಪ್ರಾಂಶುಪಾಲರಾದ ಕೆ.ಆರ್.ಭಾರತಿ, ದಾನಿಗಳಾದ ಸೋಮೇಶ್ ಮಾತನಾಡಿದರು.

ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ, ಸದಸ್ಯೆ ದಮಯಂತಿ ಕರುಂಬಯ್ಯ, ಮುಖ್ಯ ಶಿಕ್ಷಕ ಸೋಮಶೇಖರ್, ಎಸ್‍ಡಿಎಂಸಿ ಉಪಾಧ್ಯಕ್ಷ ಪೊನ್ನಪ್ಪ, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಕರುಂಬಯ್ಯ, ಶನಿವಾರಸಂತೆ ವಿಘ್ನೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಟಿ.ಪಿ.ಶಿವಪ್ರಕಾಶ್ ಭಾಗವಹಿಸಿದ್ದರು.

ಆಲೂರುಸಿದ್ದಾಪುರ ಕ್ರೀಡಾಂಗಣದಲ್ಲಿ ಪ್ರೌಢಶಾಲಾ ವಿಭಾಗದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಸೋಮಯ್ಯ ಕರುಂಬಯ್ಯ ಪ್ರವೀಣ್ ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.