ಸುಂಟಿಕೊಪ್ಪ: ಇಲ್ಲಿನ ಶ್ರೀ ಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ದುರ್ಗಾ ಲಕ್ಷ್ಮಿ ದೇವಸ್ಥಾನದ ಪ್ರತಿಷ್ಠಾಪನಾ ಅಷ್ಟ ಬಂಧ ಬ್ರಹ್ಮ ಕಲಶೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಬುಧವಾದ ಶ್ರದ್ಧಾಭಕ್ತಿಯಿಂದ ಲೋಕಾರ್ಪಣೆಗೊಂಡಿತು.
ಬುಧವಾರ ಬೆಳಿಗ್ಗೆ 6ಕ್ಕೆ ಗಣಪತಿ ಹೋಮದೊಂದಿಗೆ ಪ್ರಾರಂಭವಾದ ವೈದಿಕ ಮತ್ತು ಧಾರ್ಮಿಕ ಕೈಂಕರ್ಯಗಳು, ನಂತರ ಆದಿವಾಹನ ವಿಡರ್ತಿ ಪೂಜೆ, ಅಯ್ಯಪ್ಪಸ್ವಾಮಿಯ ಬ್ರಹ್ಮಕಲಶ ಪೂಜೆ, ಭಗವತಿಯ ಬ್ರಹ್ಮಕಲಶ ಪೂಜೆ, ಗಣಪತಿಯ ಬ್ರಹ್ಮಕಲಶ ಪೂಜೆ, ಗಣಪತಿಯ ಬ್ರಹ್ಮಬಕಲಶಾಭಿಷೇಕ, ಭಗವತಿಯ ಪ್ರಸಾದ ಪ್ರತಿಷ್ಠೆಯ ಬಳಿಕ ಕೇರಳದ ತಳಿಪರಂಬು ಕಾಳಾ ಘಾಟ್ ಇಲ್ಲಂ ಮಧುಸೂದನ್ ತಂತ್ರಿ ಅವರ ನೇತೃತ್ವದ ತಂಡ ವಿವಿಧ ವಿಶೇಷ ಪೂಜೆಯೊಂದಿಗೆ ಶುಭ ಮುಹೂರ್ತದ ಕುಂಭ ಲಗ್ನದಲ್ಲಿ ದುರ್ಗಾಲಕ್ಷ್ಮಿದೇವಿಯ ಪ್ರತಿಷ್ಟಾಪನೆ ನೆರವೇರಿಸಿದರು.
ನಿದ್ರಾಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಅಯ್ಯಪ್ಪ ಸ್ವಾಮಿಯ ಕಲಶಾಭಿಷೇಕ ನಡೆಯಿತು.
8 ತಿಂಗಳ ಹಿಂದೆ ₹20 ಲಕ್ಷ ವೆಚ್ಚದಲ್ಲಿ ದೇವಾಲಯ ನಿರ್ಮಾಣಗೊಂಡಿದ್ದು, ಪುತ್ತೂರಿನ ಜಗನಿವಾಸ್ ರಾವ್ ಅವರು ಭೂಮಿಪೂಜೆಯ ಜೊಗೆ ಶಿಲಾನ್ಯಾಸ ನೆರವೇರಿಸಿದ್ದರು. ಪುತ್ತೂರಿನ ಶಿಲ್ಪಿಗಳಾದ ಕೃಷ್ಣಪ್ರಸಾದ್ ಅವರ ನೇತೃತ್ವದಲ್ಲಿ ದೇವಾಲಯದ ಕೆತ್ತನೆ ಕೆಲಸ ಪೂರ್ಣಗೊಳಿಸಿದ್ದರು.
ದೇವಾಲಯದ ಪ್ರಧಾನ ಅರ್ಚಕ ಗಣೇಶ ಉಪಾಧ್ಯಾಯ ಅವರ ನೇತೃತ್ವದಲ್ಲಿ ಮಧ್ಯಾಹ್ನ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ ಪೂಜೆ, ದೀಪರಾಧನೆ ನಡೆದು ಮಹಾಪೂಜೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ದೇವಾಲಯದ ಸಮಿತಿಯ ಅಧ್ಯಕ್ಷ ಬಿ.ಎಂ. ಸುರೇಶ್, ಉಪಾಧ್ಯಕ್ಷರಾದ ಎಂ.ಮಂಜುನಾಥ್, ಬಿ.ಕೆ. ಪ್ರಶಾಂತ್, ಬಿ.ಎಲ್.ಆನಂದ, ಪ್ರಧಾನ ಕಾರ್ಯದರ್ಶಿ ಎಂ.ಚಂದ್ರ, ಖಜಾಂಚಿ ಎಂ.ಆರ್.ಶಶಿಕುಮಾರ್, ಎ.ಶ್ರೀಧರನ್, ಧನುಕಾವೇರಪ್ಪ, ಸುರೇಶ್ ಗೋಪಿ, ಕೆ.ಎ. ಬಾಲಕೃಷ್ಣ, ಕನಿಸ್, ಅನೂಪ್ ಹಾಗೂ ಸಮಿತಿಯ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.