ADVERTISEMENT

ಕಾಡಾನೆ ದಾಳಿಗೆ ಕೃಷಿಕ ಬಲಿ: ಹೆದ್ದಾರಿ ತಡೆದು ರೈತ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಮೇ 2019, 13:57 IST
Last Updated 3 ಮೇ 2019, 13:57 IST
ಪ್ರತಿಭಟನಾ ಸ್ಥಳಕ್ಕೆ ಡಿಸಿಎಫ್ ಮಂಜುನಾಥ್ ಸಂಧಾನ ನಡೆಸಿದರು
ಪ್ರತಿಭಟನಾ ಸ್ಥಳಕ್ಕೆ ಡಿಸಿಎಫ್ ಮಂಜುನಾಥ್ ಸಂಧಾನ ನಡೆಸಿದರು   

ಪೊನ್ನಂಪೇಟೆ: ಇಲ್ಲಿನ ಕಾಯಿಮಾನಿ ಗ್ರಾಮದಲ್ಲಿ ಕೃಷಿಕ ಚೋಕೀರ ಸುಧಾ (45) ಅವರು ಗುರುವಾರ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಸಮಯದಲ್ಲಿ ಹೆದ್ದಾರಿ ಪಕ್ಕದಲ್ಲಲಿ ಕಾಡಾನೆಯೊಂದು ದಾಳಿ ನಡೆಸಿ ಕೊಂದು ಹಾಕಿದೆ.

ಘಟನೆ ಖಂಡಿಸಿ ನೂರಾರು ಮಂದಿ ರೈತರು ಮೃತದೇಹವನ್ನು ಇಟ್ಟು ಶ್ರೀಮಂಗಲದಿಂದ ಕೇರಳಕ್ಕೆ ತೆರಳುವ ಅಂತರರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಮಧ್ಯಾಹ್ನದವರೆಗೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಡಿಸಿಎಫ್ ಮಂಜುನಾಥ್ ಅವರು ಸ್ಥಳಕ್ಕೆ ಬಂದು ಸಮಾಧಾನಪಡಿಸಲೆತ್ನಿಸಿದರೂ ರೈತರು ಪ್ರತಿಭಟನೆಯನ್ನು ವಾಪಸ್ ಪಡೆಯಲಿಲ್ಲ.‌

ಬಳಿಕ ಸ್ಥಳಕ್ಕೆ ಬಂದ ಸಿಸಿಎಫ್ ಸಂತೋಷ್, ‘ಕಾಡಾನೆ ದಾಳಿಗೆ ಬಲಿಯಾದವರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಮೃತರ ಕುಟುಂಬಕ್ಕೆ 5 ವರ್ಷಗಳವರೆಗೆ ಮಾಸಿಕ ₹ 2,000 ಸಹಾಯಧನ ಸಿಗಲಿದೆ. ಹೆಚ್ಚಿನ ಮೊತ್ತದ ಪರಿಹಾರಕ್ಕೆ ಶೀಘ್ರದಲ್ಲಿ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.

ADVERTISEMENT

ಮೈಸೂರಿನ ಸಮೀಪದಲ್ಲಿ ಕಾಡಾನೆಗಳು:

ಮೈಸೂರು ನಗರಕ್ಕೆ 18 ಕಿ.ಮೀ ದೂರದ ಜಯಪುರದ ಸಮೀಪ 2 ಕಾಡಾನೆಗಳು ಬೀಡುಬಿಟ್ಟಿವೆ. ಸಾಕಾನೆಗಳಾದ ‘ಅಭಿಮನ್ಯು’ ಮತ್ತು ‘ಕೃಷ್ಣ’ ಆನೆಗಳ ಸಹಾಯದಿಂದ ನೂರಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಓಡಿಸಲು ಯತ್ನಿಸಿದರೂ ಕಾಡಾನೆಗಳು ರಾತ್ರಿ ವೇಳೆ ಮರಳಿ ರೈತರ ತೋಟಗಳಿಗೆ ದಾಳಿ ಮಾಡುತ್ತಿವೆ. ಮತ್ತೆ 3 ಸಾಕಾನೆಗಳನ್ನು ಕರೆಸಲು ತೀರ್ಮಾನಿಸಲಾಗಿದ್ದು, ಇನ್ನೆರಡು ದಿನಗಳ ನಂತರ ಆನೆಗಳ ಸೆರೆಗೆ ಚಿಂತನೆ ನಡೆಸಲಾಗುವುದು’ ಎಂದು ಡಿಸಿಎಫ್ ಡಾ.ಪ್ರಶಾಂತ್‌ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.