ಸಿದ್ದಾಪುರ:ಮಡಿಕೇರಿ ಕೋವಿಡ್ ಆಸ್ಪತ್ರೆಯಿಂದ ಪರಾರಿಯಾಗಿದ್ದ ಯುವಕನನ್ನು ಸಿದ್ದಾಪುರ ಪೊಲೀಸರು ಪತ್ತೆ ಹಚ್ಚಿ ಗುರುವಾರ ಮತ್ತೆ ಆಸ್ಪತ್ರೆಗೆ ಸೇರಿಸಿದ್ದಾರೆ.
‘ಗುಣಮುಖನಾಗಿದ್ದರೂ ಮಡಿಕೇರಿ ಕೋವಿಡ್ ಆಸ್ಪತ್ರೆಯ ವೈದ್ಯರು ಆಸ್ಪತ್ರೆಯಿಂದ ಕಳುಹಿಸುತ್ತಿಲ್ಲ’ ಎಂದು ಬೇಸರಗೊಂಡ ಸಿದ್ದಾಪುರ ಸಮೀಪದ ಅರೆಕಾಡು ಮೂಲದ ಸೋಂಕಿತ ಯುವಕ ಬುಧವಾರ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಸಿದ್ದಾಪುರದಲ್ಲಿ ಸುತ್ತಾಡುತ್ತಿದ್ದ.
ಸೋಂಕಿತ ಯುವಕ ತಪ್ಪಿಸಿಕೊಂಡಿರುವ ಬಗ್ಗೆ ಮಡಿಕೇರಿ ಪೊಲೀಸ್ ಠಾಣೆಗೆ ವೈದ್ಯಾಧಿಕಾರಿಗಳು ದೂರು ನೀಡಿ, ಪತ್ತೆಗಾಗಿ ಕೋರಿದ್ದರು.
ಗುರುವಾರ ಬೆಳಿಗ್ಗೆ ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿದ ಸೋಂಕಿತ ಯುವಕ, ‘ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ನೋಡಿಕೊಳ್ಳುತ್ತಿಲ್ಲ’ ಎಂದು ಹೇಳಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು, ಆತನನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್ ಕರೆಸಿದ್ದಾರೆ. ಆದರೆ, ಪೊಲೀಸ್ ಠಾಣೆಗೆ ಆಂಬುಲೆನ್ಸ್ ಬರುತ್ತಿರುವಂತೆಯೇ ಅಲ್ಲಿಂದಲೂ ಆತ ಪರಾರಿಯಾಗಿದ್ದಾನೆ.
ಕೆಲವು ಗಂಟೆಗಳ ಬಳಿಕ ಪಟ್ಟಣದ ವಿರಾಜಪೇಟೆ ಮುಖ್ಯರಸ್ತೆಯಲ್ಲಿ ಓಡಾಡುತ್ತಿರುವ ಮಾಹಿತಿ ದೊರತ ಪೊಲೀಸರು, ಅಲ್ಲಿಗೆ ತೆರಳಿ ಆತನನ್ನು ಸುತ್ತುವರಿದು ಓಡಿಹೋಗದಂತೆ ತಡೆದಿದ್ದಾರೆ.
ಬಳಿಕ ಆಂಬುಲೆನ್ಸ್ ಮೂಲಕ ಸೋಂಕಿತನನ್ನು ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.