ADVERTISEMENT

ಸಾಲಮನ್ನಾ: ಇಂದಿನಿಂದ ಟೋಕನ್‌ ವಿತರಣೆ

ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರ ಸಂಖ್ಯೆ 17,780  

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 13:38 IST
Last Updated 13 ಡಿಸೆಂಬರ್ 2018, 13:38 IST
ಕೊಡಗು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಸಾಂಕೇತಿಕವಾಗಿ ರೈತರೊಬ್ಬರಿಗೆ ಗುರುವಾರ ಟೋಕನ್‌ ವಿತರಣೆ ಮಾಡಿದರು 
ಕೊಡಗು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಸಾಂಕೇತಿಕವಾಗಿ ರೈತರೊಬ್ಬರಿಗೆ ಗುರುವಾರ ಟೋಕನ್‌ ವಿತರಣೆ ಮಾಡಿದರು    

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆದಿರುವ ರೈತರಿಗೆ ಗುರುವಾರದಿಂದಲೇ ಟೋಕನ್‌ ವಿತರಿಸುವ ಕಾರ್ಯ ಆರಂಭಗೊಂಡಿದ್ದು, ರೈತರು ತಮ್ಮ ನಿಗದಿತ ಶಾಖೆಗಳಲ್ಲಿ ಅಗತ್ಯ ದಾಖಲೆ ನೀಡಿ ಟೋಕನ್‌ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದರು.

ಜಿಲ್ಲೆಯಲ್ಲಿ ವಾಣಿಜ್ಯ ಬ್ಯಾಂಕ್‌ನ 145 ಶಾಖೆಗಳಿವೆ. ಈ ಬ್ಯಾಂಕ್‌ನಲ್ಲಿ 17,780 ರೈತರು ₹1,350 ಕೋಟಿ ಬೆಳೆಸಾಲ ಪಡೆದುಕೊಂಡಿದ್ದಾರೆ. ಜನವರಿ 2ನೇ ವಾರದ ತನಕವೂ ಟೋಕನ್‌ ವಿತರಣೆ ಮಾಡಲಾಗುತ್ತದೆ. ಆದ್ದರಿಂದ, ರೈತರು ಆತಂಕ ಹಾಗೂ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಎಲ್ಲರಿಗೂ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.

‘ಮೊದಲ ಹಂತದಲ್ಲಿ ಕೊಡಗು, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 10 ಜಿಲ್ಲೆಗಳು ಆಯ್ಕೆಯಾಗಿವೆ. ಆದ್ದರಿಂದ ರೈತರು ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದೇ ಟೋಕನ್‌ ‍ಪಡೆದುಕೊಳ್ಳಬಹುದು. ಸರ್ಕಾರದ ಸೌಲಭ್ಯವನ್ನು ಎಲ್ಲರಿಗೂ ತಲುಪಿಸುತ್ತೇವೆ’ ಎಂದು ಹೇಳಿದರು.

ADVERTISEMENT

2009ರ ಏ.1ರಿಂದ 2017ರ ಡಿ.31ರವರೆಗೆ ಬಾಕಿಯಿರುವ (ಸುಸ್ತಿಸಾಲ, ಪುನರಾವಸ್ತಿ ಸಾಲ, ಎನ್‌‍ಪಿಎ ಸಾಲ) ಬೆಳೆಸಾಲ ಮನ್ನಾ ಯೋಜನೆಗಾಗಿ ರೈತರಿಂದ ಅಗತ್ಯ ದಾಖಲೆ ಸಂಗ್ರಹ ಮಾಡಲಾಗುತ್ತಿದೆ. ರೈತರು ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಹಾಗೂ ಆರ್‌ಟಿಸಿ ಸಂಖ್ಯೆಯನ್ನು ಸಲ್ಲಿಸಬೇಕು. ಸಾಲಮನ್ನಾ ವಿಚಾರದಲ್ಲಿ ಗೊಂದಲವಿದ್ದರೆ ತಹಶೀಲ್ದಾರ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಅವರು ಇತ್ಯರ್ಥ ಪಡಿಸಲಿದ್ದಾರೆ ಎಂದರು.

ಬ್ಯಾಂಕ್‌ನ ಕೆಲಸದ ಅವಧಿಯಲ್ಲಿ ರೈತರು ಹೆಸರು ನೋಂದಾಯಿಸಿಕೊಳ್ಳಬಹುದು. ಒಂದು ಬ್ಯಾಂಕ್‌ನಲ್ಲಿ ಪ್ರತಿನಿತ್ಯ 40 ರೈತರು ದಾಖಲೆ ನೀಡಿ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಗೊಂದಲಗಳಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಸಹಾಯವಾಣಿ: 08272 221077ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್‌ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.