ಶನಿವಾರಸಂತೆ: ಇಲ್ಲಿಗೆ ಸಮೀಪದ ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜದಿಂದ ಶನಿವಾರ ರಾತ್ರಿ ಹುತ್ತರಿ (ಪುತ್ತರಿ) ಹಬ್ಬವನ್ನು ಆಚರಿಸಲಾಯಿತು.
ಅರೆಭಾಷೆ ಗೌಡ ಸಮಾಜದವರು ಆಲೂರುಸಿದ್ದಾಪುರ ಬೈಮನ ಕಾಂತಿ ಅವರಿಗೆ ಸೇರಿದ ಭತ್ತದ ಗದ್ದೆಯಲ್ಲಿ ಹಬ್ಬದ ಸಂಪ್ರದಾಯದಂತೆ ಪೂಜೆ ಸಲ್ಲಿಸಿದ ಬಳಿಕ ರಾತ್ರಿ ಕದಿರು ತೆಗೆಯುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು.
ನಂತರ ಅರೆಭಾಷೆ ಗೌಡ ಸಮುದಾಯದವರು ಗದ್ದೆಯಿಂದ ತಂದ ಭತ್ತದ ಕದಿರನ್ನು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನೆರೆ ಕಟ್ಟಲಾಯಿತು. ತದನಂತರ, ಭತ್ತದ ನೆರೆಯನ್ನು ಅಕ್ಕಪಕ್ಕದ ಬಾಂಧವರಿಗೆ ವಿತರಿಸಲಾಯಿತು.
ಹುತ್ತರಿ ಹಬ್ಬದ ಕದಿರು ತೆಗೆಯುವ ಮೆರವಣಿಗೆಯಲ್ಲಿ ಸಮುದಾಯದ ಹಿರಿಯರು, ಪುರುಷರು, ಮಹಿಳೆಯರು, ಯುವಕ, ಯುವತಿಯರು ಪಾಲ್ಗೊಂಡಿದ್ದರು. ಅರೆಭಾಷೆ ಗೌಡ ಸಮಾಜದ ಮುಖಂಡರಾದ ಪರ್ಲಕೋಟಿ ಸತೀಶ್, ಎಡಕೇರಿ ಜಯರಾಮ, ಕರಕರನ ಪೆಮ್ಮಯ್ಯ, ಹೊಸೂರು ಪ್ರಕಾಶ್, ಬೈಮನ ಮಹೇಶ್, ಕೆಮ್ಮರನ ದೇವಿಕಾಂತ, ಕೈಬಿಲಿ ಬೇಬಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.