ಮಡಿಕೇರಿ: ‘ವಲಯ ಅರಣ್ಯಾಧಿಕಾರಿ, ಉಪವಲಯ ಅರಣ್ಯಾಧಿಕಾರಿ ಸೇರಿದಂತೆ ಉನ್ನತ ಹುದ್ದೆಗಳಿಗೆ ಅರಣ್ಯಶಾಸ್ತ್ರ ಪದವೀಧರರನ್ನೇ ಪರಿಗಣಿಸಬೇಕು’ ಎಂದು ಒತ್ತಾಯಿಸಿ ರಾಜ್ಯದ ಎಲ್ಲ 3 ಅರಣ್ಯ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.
‘ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿರುವ ಅರಣ್ಯ ಕಾಲೇಜಿನ 150 ವಿದ್ಯಾರ್ಥಿಗಳು, ಶಿವಮೊಗ್ಗ ಜಿಲ್ಲೆಯ ಇರುವಕ್ಕಿಯ ಕಾಲೇಜಿನ 143 ವಿದ್ಯಾರ್ಥಿಗಳು, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಾಲೇಜಿನ 160 ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿದ್ದಾರೆ’ ಎಂದು ಕರ್ನಾಟಕ ಅರಣ್ಯ ವಿದ್ಯಾರ್ಥಿಗಳು ಮತ್ತು ಪದವೀಧರರ ಸಂಘದ ಅಧ್ಯಕ್ಷ ಅಕ್ಷಯ್ಕುಮಾರ್ ತಿಳಿಸಿದರು.
‘ಬೇರೆ ರಾಜ್ಯಗಳಲ್ಲಿ ಅರಣ್ಯಶಾಸ್ತ್ರ ಪದವೀಧರರನ್ನೇ ಪರಿಗಣಿಸಲಾಗುತ್ತಿದೆ. ರಾಜ್ಯದಲ್ಲೂ ಇದೇ ಮಾದರಿಯನ್ನು ಜಾರಿಗೆ ತರಬೇಕು’ ಎಂದು ಅವರು ಒತ್ತಾಯಿಸಿದರು.
‘ಶೇ 50ರಷ್ಟು ಹುದ್ದೆಗಳಿಗೆ ಮಾತ್ರವೇ ಅರಣ್ಯಶಾಸ್ತ್ರ ಪದವೀಧರರನ್ನು ಪರಿಗಣಿಸಲಾಗುತ್ತಿರುವುದರಿಂದ ಅನ್ಯಾಯವಾಗಿದೆ. ವೈದ್ಯಕೀಯ ಪದವೀಧರರನ್ನು ವೈದ್ಯರ ಹುದ್ದೆಗಳಿಗೆ, ಎಂಜಿನಿಯರಿಂಗ್ ಪದವೀಧರರನ್ನು ಎಂಜಿನಿಯರಿಂಗ್ ಹುದ್ದೆಗಳಿಗೆ ಪರಿಗಣಿಸುವಂತೆ ಇಲ್ಲಿಯೂ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.
‘ಅರಣ್ಯದ ನೈಜ ಅನುಭವದೊಂದಿಗೆ ಪ್ರಾಯೋಗಿಕ ಶಿಕ್ಷಣ ಪಡೆದವರ ಬದಲು, ಇತರೆ ಪದವಿ ಪಡೆದವರನ್ನು ಪರಿಗಣಿಸುವುದು ಸರಿಯಲ್ಲ, ಒಟ್ಟು 4 ವರ್ಷದ ಪದವಿಯನ್ನು ₹ 4 ಲಕ್ಷಕ್ಕೂ ಹೆಚ್ಚು ಹಣ ವ್ಯಯಿಸಿ ಪಡೆಯುವುದಾರೂ ಏಕೆ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.