ADVERTISEMENT

ಮಠಗಳಿಗೆ ಶಕ್ತಿ ತುಂಬುವ ಕೆಲಸ ಸರ್ಕಾರ ಮಾಡಲಿ: ಸಿದ್ಧಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 12:17 IST
Last Updated 12 ಡಿಸೆಂಬರ್ 2020, 12:17 IST
ಶನಿವಾರಸಂತೆ ಸಮೀಪದ ಆಲೂರುಸಿದ್ಧಾಪುರದಲ್ಲಿ ನಡೆದ ಶತಾಯುಷಿ ದಿವಂಗತ ಸಿದ್ಧಮಲ್ಲಯ್ಯ ಅವರ ಶ್ರದ್ಧಾಂಜಲಿ ಕಾರ್ಯಕ್ರಮದ ನಂತರ ತುಮಕೂರು ಸಿದ್ಧಾಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು
ಶನಿವಾರಸಂತೆ ಸಮೀಪದ ಆಲೂರುಸಿದ್ಧಾಪುರದಲ್ಲಿ ನಡೆದ ಶತಾಯುಷಿ ದಿವಂಗತ ಸಿದ್ಧಮಲ್ಲಯ್ಯ ಅವರ ಶ್ರದ್ಧಾಂಜಲಿ ಕಾರ್ಯಕ್ರಮದ ನಂತರ ತುಮಕೂರು ಸಿದ್ಧಾಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು   

ಶನಿವಾರಸಂತೆ: ಮಠಮಾನ್ಯಗಳನ್ನು ದುರ್ಬಲಗೊಳಿಸಲು ನಡೆಯುವ ಹುನ್ನಾರನ್ನು ಸಹಿಸಲು ಸಾಧ್ಯವಿಲ್ಲ ಎಂದು ತುಮಕೂರು ಸಿದ್ಧಗಂಗಾ ಮಠಾಧೀಶ ಸಿದ್ದಲಿಂಗ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಸಮೀಪದ ಆಲೂರು ಸಿದ್ಧಾಪುರದಲ್ಲಿ ನಡೆದ ಶತಾಯುಷಿ ದಿವಂಗತ ಸಿದ್ಧಮಲ್ಲಯ್ಯ ಅವರ ಶ್ರದ್ಧಾಂಜಲಿ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಸರ್ಕಾರ ಮತ್ತು ಅಧಿಕಾರಿಗಳು ಮಠಗಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ದುರ್ಬಲಗೊಳಿಸಲು ಹೋಗಬಾರದು. ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಸಾರ್ವಜನಿಕ ಸೇವೆಯಲ್ಲೂ ತೊಡಗಿಸಿಕೊಂಡಿದೆ, ಹೀಗಿರುವಾಗ ಹಿಂದಿನ ಜಿಲ್ಲಾಧಿಕಾರಿಯೊಬ್ಬರು ಮಠದ ಆಸ್ತಿಯನ್ನು ಸರ್ಕಾರಿ ಜಾಗವೆಂದು ಬೇರೆ ಉದ್ದೇಶಕ್ಕೆ ನೀಡಿ ಆದೇಶಿಸಿರುವುದು ಕಾನೂನುಬಾಹಿರ. ಇದನ್ನು ಎಲ್ಲರೂ ಖಂಡಿಸಲೇಬೇಕಾಗಿದೆ. ಈವರೆಗೂ ಮಠದ ಸುಪರ್ದಿಯಲ್ಲಿರುವ ಜಮೀನು ಸರ್ಕಾರಿ ಆಸ್ತಿಯಾಗುವುದು ಹೇಗೆ ? ಎಂದು ಈ ವೇಳೆ ಪ್ರಶ್ನಿಸಿದರು.

ADVERTISEMENT

ರಾಜ್ಯಾದ್ಯಂತ ಮಠಗಳು ಶಿಕ್ಷಣ, ಆರೋಗ್ಯ, ದಾಸೋಹ ಸೇವೆಯಲ್ಲಿ ತೊಡಗಿಸಿಕೊಂಡಿವೆ. ಅಂತಹ ಮಠಗಳನ್ನು ಕೆಲವು ಅಧಿಕಾರಿಗಳು ದುರ್ಬಲಗೊಳಿಸಲು ಹೊರಟಿರುವುದು ದುರದೃಷ್ಟಕರ. ಕೊಡಗು ಜಿಲ್ಲೆಯಲ್ಲಿ ರಾಜರ ಕಾಲದಿಂದಲೂ ಮಠಮಾನ್ಯಗಳಿದ್ದು ಅವುಗಳಿಗೆ ರಾಜರ ಕೊಡುಗೆ ಅಪಾರವಾಗಿವೆ. ಕೊಡಗು ಜಿಲ್ಲೆಯಲ್ಲಿ ಅಂದು 63 ಮಠಗಳಿದ್ದವು.ಇಂದು ಬೆರಳೆಣಿಕೆಯಷ್ಟಾಗಿವೆ ಎಂದು ವಿಷಾಧಿಸಿದರು.

ಈ ಬಗ್ಗೆ ಸಮಾಜಬಾಂಧವರು ಪ್ರತಿಭಟಿಸಬೇಕು. ನ್ಯಾಯಾಲಯದ ಮೊರೆ ಹೋಗಿದ್ದರೂ ಅಧಿಕಾರಿಗಳು ಮಠಗಳಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.