
ಸೋಮವಾರಪೇಟೆ: ತಾಲ್ಲೂಕಿನ ಗೌಡಳ್ಳಿ ನವದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿನ ಪರಿವಾರ ದೈವಗಳ ನೇಮೋತ್ಸವ ಈಚೆಗೆ ದೇವಾಲಯದ ಅವರಣದಲ್ಲಿ ನಡೆಯಿತು.
ರಕ್ತೇಶ್ವರಿ, ವರ್ಣಾರ ಪಂಜುರ್ಲಿ, ಮಂತ್ರ ಗುಳಿಗದ ಕೋಲ ನಡೆಯಿತು. ನೂರಾರು ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಪ್ರಯುಕ್ತ ದೇವಾಲಯದಲ್ಲಿ ಬೆಳಿಗ್ಗೆಯಿಂದ ಗಣಹೋಮ, ದೈವಗಳ ಶುದ್ಧೀಕರಣ, ಅನ್ನದಾನ ನಡೆಯಿತು.
ಅನೇಕರು ಹರಕೆ ತೀರಿಸಿದರು. ಕೆಲವರು ಇಷ್ಟಾರ್ಥ ಸಿದ್ಧಿಗಾಗಿ ದೈವಗಳಲ್ಲಿ ಹರಕೆ ಹೊತ್ತರು. ಮಂಗಳೂರು ಮೂಲದ ದೈವಗಳ ನೃತ್ಯ ಸೇರಿದ್ದ ಭಕ್ತಾದಿಗಳ ಗಮನ ಸೆಳೆಯಿತು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ ಮಾತನಾಡಿ, ‘ದಿ.ವೆಂಕಟರಮಣಚಾರ್ಯ ಅವರ ಶ್ರಮದಿಂದ ಗೌಡಳ್ಳಿಯಲ್ಲಿ ಶ್ರೀನವದುರ್ಗಾ ಪರಮೇಶ್ವರಿ ದೇವಾಲಯ ನಿರ್ಮಿಸಿ, ಸರ್ವ ಧರ್ಮಕ್ಷೇತ್ರವಾಗಿ ಬೆಳೆಯಲು ಕಾರಣಕರ್ತರಾಗಿದ್ದಾರೆ. ಈ ಕ್ಷೇತ್ರದ ಶಕ್ತಿ ಇಲ್ಲಿನ ಭಕ್ತಾದಿಗಳಿಗೆ ತಿಳಿದಿದೆ. ದಕ್ಷಿಣ ಕನ್ನಡ ಯಕ್ಷಗಾನ ಕಲೆಯ ಪ್ರದರ್ಶನ ಪ್ರತಿವರ್ಷ ಗೌಡಳ್ಳಿ ಕ್ಷೇತ್ರದಲ್ಲಿ ನಡೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪರಿವಾರ ದೈವಗಳ ಪ್ರತಿಷ್ಠಾಪನೆ ಹಾಗೂ ನೇಮೋತ್ಸವ ನಡೆಯುತ್ತಿದೆ. ಇದರಿಂದ ಕ್ಷೇತ್ರದ ಶಕ್ತಿ ಹೆಚ್ಚಾಗಿದೆ’ ಎಂದು ಹೇಳಿದರು.
ಪ್ರಧಾನ ಅರ್ಚಕ ವಿಶ್ವರೂಪಾಚಾರ್ಯ, ಪದಾಧಿಕಾರಿಗಳಾದ ಮಹೇಶ್, ಚಂದ್ರಶೇಖರ್, ಗುರುಪ್ರಸಾದ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.