ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ಜೋರಾಗಿದೆ. ಒಂದೆಡೆ ರಾಜಕೀಯ ಪಕ್ಷಗಳ ಬೆಂಬಲಿತರು ಮತ್ತು ಸ್ವತಂತ್ರ ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದ್ದರೆ, ಮತ್ತೊಂದೆಡೆ ಪತಿ-ಪತ್ನಿಯ ನಡುವೆ ನೇರ ರಾಜಕೀಯ ಕದನ ಏರ್ಪಟ್ಟಿದೆ.
ಸಮೀಪದ ಏಳನೇ ಹೊಸಕೋಟೆಯ 2ನೇ ವಾರ್ಡಿನಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಗಳಾಗಿ ಕಿಶೋರ್ ಮತ್ತು ಶ್ರೀಜಾ ದಂಪತಿ ನಡುವೆಯೇ ನೇರ ಹಣಾಹಣಿ. ಇದು ಮತದಾರರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
7ನೇ ಹೊಸಕೋಟೆಯ ಕಿಶೋರ್ ಅವರು 1ನೇ ವಾರ್ಡಿನಲ್ಲಿಯೂ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಮತ್ತೊಂದೆಡೆ ಪತ್ನಿ ವಿರುದ್ಧವೇ 2ನೇ ವಾರ್ಡಿನಲ್ಲಿಯೂ ಸ್ಪರ್ಧಾ ಕಣದಲ್ಲಿದ್ದಾರೆ.
ಇನ್ನೊಂದು ಕುತೂಹಲದ ಸಂಗತಿಯೆಂದರೆ, ಈ ದಂಪತಿ ಜೊತೆಯಲ್ಲಿಯೇ ಪ್ರಚಾರ ನಡೆಸುತ್ತಿದ್ದಾರೆ. ಇದರಿಂದ ಮತದಾರರಲ್ಲಿ ಗೊಂದಲವೂ ಮೂಡಿದೆ.
ಕಿಶೋರ್ ಅವರ ಗೆಳೆಯರು, ಆಪ್ತರು ಏಳನೇ ಹೊಸಕೋಟೆ-2ನೇ ವಾರ್ಡಿನಲ್ಲಿ ನಾಮಪತ್ರವನ್ನು ವಾಪಸ್ ತೆಗೆದುಕೊಳ್ಳುವಂತೆ ಮನವರಿಕೆ ಮಾಡಿದರೂ ಅದಕ್ಕೆ ಒಪ್ಪದ ಅವರು ಸ್ಪರ್ಧೆಗೆ ಇಳಿದಿದ್ದಾರೆ. ಅದಕ್ಕೆ ಅವರು ಸೊಪ್ಪು ಹಾಕದೇ ಕಣದಲ್ಲಿ ಉಳಿದಿದ್ದಾರೆ. ಮತದಾರರು ಯಾರನ್ನೂ ಗೆಲುವಿನ ದಡಕ್ಕೆ ಕೊಂಡೊಯ್ಯಲಿದ್ದಾರೆ ಎಂಬುದನ್ನು ನೋಡಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.