ADVERTISEMENT

ಹಸಿ ಮೆಣಸಿನ ಕಾಯಿ ದರ ಕುಸಿತ

ಬೆಳೆಗಾರರಿಗೆ ನಿರಾಸೆ, ಗಿಡ ಸಹಿತ ಉಳುಮೆ ಮಾಡಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 16:31 IST
Last Updated 26 ಜೂನ್ 2022, 16:31 IST
ಶನಿವಾರಸಂತೆಯ ಸಂತೆ ಮಾರುಕಟ್ಟೆಯಲ್ಲಿ ವಾರದ ಸಂತೆಯ ದಿನ ವಿವಿಧ ತಳಿಯ ಹಸಿ ಮೆಣಸಿನ ಕಾಯಿ ದರ ಕುಸಿತ ಕಂಡರೂ ವ್ಯಾಪಾರ ಬಿರುಸಿನಿಂದ ನಡೆಯಿತು.
ಶನಿವಾರಸಂತೆಯ ಸಂತೆ ಮಾರುಕಟ್ಟೆಯಲ್ಲಿ ವಾರದ ಸಂತೆಯ ದಿನ ವಿವಿಧ ತಳಿಯ ಹಸಿ ಮೆಣಸಿನ ಕಾಯಿ ದರ ಕುಸಿತ ಕಂಡರೂ ವ್ಯಾಪಾರ ಬಿರುಸಿನಿಂದ ನಡೆಯಿತು.   

ಶನಿವಾರಸಂತೆ: ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ವಾರದ ಸಂತೆ ದಿನ ಉಲ್ಕಾ, ಬಂಗಾರಮ್ಮ, ಪ್ರಿಯಾಂಕ ವಿವಿಧ ತಳಿಯ ಹಸಿ ಮೆಣಸಿನ ಕಾಯಿ ದರ ಕುಸಿತ ಕಂಡರೂ ವ್ಯಾಪಾರ ಬಿರುಸಿನಿಂದ ನಡೆಯಿತು.

1 ಕೆ.ಜಿ.ಮೆಣಸಿನಕಾಯಿ ₹12 ರಂತೆ ವ್ಯಾಪಾರಿಗಳು ಖರೀದಿಸಿದರು. ವ್ಯಾಪಾರಿಗಳು ಹೇಳಿದ ದರಕ್ಕೆ ಮಾರಾಟ ಮಾಡದೇ ರೈತರಿಗೆ ಬೇರೆ ದಾರಿಯಿರಲಿಲ್ಲ.

ನಾಲ್ಕೈದು ದಿನಗಳಿಂದ ಬಿಡುವು ನೀಡುತ್ತಾ ಸಾಧಾರಣವಾಗಿ ಸುರಿಯುತ್ತಿದ್ದ ಮಳೆಗೆ ಮೆಣಸಿನಕಾಯಿ ಕೊಳೆಯುವ ಭಯದಿಂದ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರು ಮೆಣಸಿನಕಾಯಿ ಕೊಯ್ಲು ಮಾಡಿದ್ದರು. ಮಾರುಕಟ್ಟೆಗೆ ಒಂದೂವರೆ ಲೋಡ್ ಮೆಣಸಿನಕಾಯಿ ತಂದಿದ್ದರು. ಹೊರ ಜಿಲ್ಲೆ, ರಾಜ್ಯಕ್ಕೆ ರವಾನಿಸುವಾಗ ಕೊಳೆಯಬಹುದೆಂಬ ಶಂಕೆಯಿಂದ ವ್ಯಾಪಾರಿಗಳು ದಿಢೀರ್ ದರ ಕಡಿಮೆ ಮಾಡಿದರು. ‘ಇನ್ನು ಎರೆಡು ವಾರ ಮೆಣಸಿನಕಾಯಿ ಕೊಯ್ಯಬಹುದು. ಹದವಾಗಿ ಮಳೆಯಾಗುತ್ತಿದ್ದು ಭತ್ತದ ಬೀಜ ಬಿತ್ತನೆಗೂ ಸಕಾಲ, ಹಾಗಾಗಿ ಮೆಣಸಿನಕಾಯಿ ಗಿಡ ಸಹಿತ ಗದ್ದೆ ಉಳುಮೆ ಮಾಡಲಾಗುವುದು. ಕಳೆದೆರೆಡು ವರ್ಷಗಳಲ್ಲಿ ಕೋವಿಡ್-ಲಾಕ್ ಡೌನ್ ನಿಂದ ಮೆಣಸಿನಕಾಯಿ ಬೆಳೆದ ರೈತ ನಷ್ಟ ಅನುಭವಿಸಿದ್ದ. ಈ ವರ್ಷವಾದರೂ ಉತ್ತಮ ದರ ದೊರೆಯಬಹುದು ಎಂಬ ಆಸೆಯಿಂದ ಬೆಳೆದ ರೈತನಿಗೆ ಭಾರಿ ನಿರಾಶೆಯಾಯಿತು. ಅಸಲೂ ದಕ್ಕಲಿಲ್ಲ. ವಾಡಿಕೆಯಂತೆ ಬೆಳೆಯುವ ಭತ್ತದ ವ್ಯವಸಾಯದ ಸಿದ್ಧತೆಯನ್ನಾದರೂ ಮಾಡಿಕೊಳ್ಳುತ್ತೇವೆ’ ಎಂದು ಕಾಜೂರು ಗ್ರಾಮದ ಪ್ರಗತಿಪರ ಕೃಷಿಕ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.

ADVERTISEMENT

ಈ ವಾರ ಶುಂಠಿ ಬೆಳೆದ ರೈತನಿಗೆ ಮಾತ್ರ ಕೊಂಚ ನೆಮ್ಮದಿ ಮೂಡಿದೆ. ಕಾರಣ ಕಳೆದ ವಾರದ ಸಂತೆಯಲ್ಲಿ 60 ಕೆ.ಜಿ.ಶುಂಠಿ ತುಂಬಿದ ಚೀಲಕ್ಕೆ ವ್ಯಾಪಾರಿಗಳು ₹900ರಂತೆ ಖರೀದಿಸಿದ್ದರು. ಈ ವಾರ ದಿಢೀರ್ ದರ ಏರಿ 60 ಕೆ.ಜಿ.ಶುಂಠಿ ತುಂಬಿದ ಚೀಲಕ್ಕೆ ₹1,500 ದರ ದೊರೆತು ಮೊಗದಲ್ಲಿ ಮಂದಹಾಸ ಮೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.