ಮಡಿಕೇರಿ: ಅರಣ್ಯ ರಕ್ಷಕರೊಬ್ಬರ ಕೈ ಬೆರಳುಗಳನ್ನು ಕತ್ತರಿಸಿದ ಅಪರಾಧಿ ತಿಮ್ಮಯ್ಯ ಎಂಬಾತನಿಗೆ ಇಲ್ಲಿನ ಪ್ರಧಾನ ಮತ್ತು ಜಿಲ್ಲಾ ಸೆಷೆನ್ಸ್ ನ್ಯಾಯಾಲಯವು 10 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.
ಅರಣ್ಯ ರಕ್ಷಕ ಅಣ್ಣಪ್ಪ ರೈ ಎಂಬುವವರು 2022ರ ಮೇ 11ರಂದು ಗಾಳಿಬೀಡು ಕಾಲೂರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪರಾಧಿ ಗಾಳಿಬೀಡು ಗ್ರಾಮದ ತಿಮ್ಮಯ್ಯ ತನ್ನ ಮನೆಯ ಪಕ್ಕದ ಜಾಗವನ್ನು ಕಸ ವಿಲೇವಾರಿಗೆ ಗುರುತಿಸಿದ ಸಂಬಂಧ ಜಗಳ ತೆಗೆದು ಕತ್ತಿಯಿಂದ ಕುತ್ತಿಗೆ ಕಡಿಯಲು ಯತ್ನಿಸಿದಾಗ ಅಣ್ಣಪ್ಪ ರೈ ತನ್ನ ಎಡಗೈ ಒಡ್ಡಿದರು. ಆಗ ಅವರ ಎಡಗೈ ಹಸ್ತ ಸಮೇತ ಹೆಬ್ಬೆರಳು ಬಿಟ್ಟು ಉಳಿದ ಬೆರಳುಗಳು ಕತ್ತರಿಸಿ ನೆಲಕ್ಕೆ ಬಿದ್ದವು. ನಂತರ, ಮತ್ತೆ ಕುತ್ತಿಗೆ ಕಡಿಯಲು ಯತ್ನಿಸಿದಾಗ ಬಲಗೈಗೂ ತೀವ್ರ ಸ್ವರೂಪದ ಗಾಯಗಳನ್ನು ಉಂಟು ಮಾಡಿದ್ದ. ಪ್ರಕರಣ ದಾಖಲಿಸಿಕೊಂಡು ಪೊಲೀಸ್ ಸಬ್ಇನ್ಸ್ಪೆಕ್ಟರ್ ವಾಣಿಶ್ರೀ ಅವರು ಅಪರಾಧಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ ₹ 15,500 ದಂಡ ವಿಧಿಸಿದೆ.
ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಜಿ.ಅಶ್ವಿನಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.