
ಶನಿವಾರಸಂತೆ: ಪಟ್ಟಣದಲ್ಲಿ ಭಾನುವಾರ ರಾತ್ರಿ ವಿಜೃಂಭಣೆಯಿಂದ ಹನುಮ ಜಯಂತಿ ನೆರವೇರಿತು.
ವೀರಾಂಜನೇಯ ಉತ್ಸವ ಸಮಿತಿ ವತಿಯಿಂದ ಇಲ್ಲಿ ನಡೆದ 4ನೇ ವರ್ಷದ ಹನುಮ ಜಯಂತಿ ಹಾಗೂ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗಿಯಾದರು.
ಮೆರವಣಿಗೆಯಲ್ಲಿದ್ದ ಪಂಚಲೋಹದ ವೀರಾಂಜನೆಯ ಉತ್ಸವ ಮೂರ್ತಿಯು ಸೂಜಿಗಲ್ಲಿನಂತೆ ಸೆಳೆಯಿತು. ತ್ಯಾಗರಾಜ ಕಾಲೊನಿಯಲ್ಲಿರುವ ಚೌಡೇಶ್ವರಿ ಬನದಲ್ಲಿ ಗೋಪೂಜೆ ನಂತರ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ವಿಜಯ ವಿನಾಯಕ ದೇಗುಲದಲ್ಲಿ ಹೋಮ ಹಾಗೂ ಮಹಾಮಂಗಳಾರತಿಗಳು ನಡೆದವು. ನಂತರ, ಕೊಣನೂರು ಅನ್ನಪೂರ್ಣೇಶ್ವರಿ ರಥದಲ್ಲಿ ಹನುಮಂತನ ಮೂರ್ತಿಗೆ ಪುಷ್ಪನಮನ ಸಲ್ಲಿಸುವ ಮೂಲಕ ವೈಭವದ ಶೋಭಾಯಾತ್ರೆ ಆರಂಭಗೊಂಡಿತು.
ನಗರದ ಎಲ್ಲೆಡೆ ಕೇಸರಿ ಧ್ವಜಗಳು ರಾರಾಜಿಸಿದವು. ನಂದಿ ಧ್ವಜ, ಬೆಳ್ಳಿರಥಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಶನಿವಾರಸಂತೆಯ ಮುಖ್ಯರಸ್ತೆಯ ಮೂಲಕ ಗುಡುಗಳಲೆ– ಬಸವೇಶ್ವರ ದೇವಾಲಯ ತಲುಪಿ, ಐ.ಬಿ.ರಸ್ತೆ ಮಾರ್ಗವಾಗಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಬನ್ನಿಮಂಟಪ ತಲುಪಿತು.
ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಅನ್ನದಾಸೋಹದ ವ್ಯವಸ್ಥೆ ಇತ್ತು. ಶ್ವೇತ ವಸ್ತ್ರ, ಕೇಸರಿ ಶಲ್ಯ ಧರಿಸಿದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾದರು.
ನಾಸಿಕ್ ಬ್ಯಾಂಡ್ ವಾದನ ಹಾಗೂ ಚಂಡೇವಾದ್ಯಗಳು ಮೆರವಣಿಗೆ ವೈಭವವನ್ನು ಹೆಚ್ಚಿಸಿದವು. ಸಿಡಿಮದ್ದಿನ ಪ್ರದರ್ಶನ ಶೋಭಾಯಾತ್ರೆಗೆ ಮೆರುಗು ತುಂಬಿತು.
ಸಮಾಜ ಸೇವಕ ಹರಪಳ್ಳಿ ರವೀಂದ್ರ, ಸಕಲೇಶಪುರದ ರಘು, ಸೋಮವಾರಪೇಟೆ ಹಿಂದೂ ಜಾಗರಣ ವೇದಿಕೆಯ ಸುಭಾಷ್ ತಿಮ್ಮಯ್ಯ, ಶಾಂತವೇರಿ ವಸಂತ್, ವೀರಾಂಜನೇಯ ಉತ್ಸವ ಸಮಿತಿಯ ಅಧ್ಯಕ್ಷ ಪುನೀತ್ ತಾಳೂರ್, ಉಪಾಧ್ಯಕ್ಷ ದಿನೇಶ್ ಬಿಳಹ, ಖಜಾಂಚಿ ಸೋಮಶೇಖರ್ ಪೂಜಾರಿ ಸೇರಿದಂತೆ ಅನೇಕ ಪ್ರಮುಖರು ಮೆರವಣಿಗೆಯಲ್ಲಿ ಭಾಗಿಯಾದರು.
ಕೆಆರ್ಸಿ ವೃತ್ತದಲ್ಲಿತ್ತು ಅನ್ನದಾನದ ವ್ಯವಸ್ಥೆ ಕೇಸರಿಮಯವಾಗಿತ್ತು ಇಡೀ ಪಟ್ಟಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.