ಸೋಮವಾರಪೇಟೆ: ‘ತಾಲ್ಲೂಕಿನಲ್ಲಿ ಸಾಕಷ್ಟು ರೈತರ ಜಮೀನಿನ ದುರಸ್ತಿ ಫೈಲ್ಗಳ ಸಮಸ್ಯೆ ಕಾಡುತ್ತಿದ್ದು, ಗ್ರಾಮ ಪಂಚಾಯಿತಿ ಮಟ್ಟದಿಂದ ಏಕಕಾಲಕ್ಕೆ ದುರಸ್ತಿ ಮಾಡುವ ನಿಟ್ಟಿನಲ್ಲಿ 125 ಕಚೇರಿಯನ್ನು ಆರಂಭಿಸಲಾಗಿದ್ದು, ರೈತರಿಗೆ ಮುಂದಿನ ದಿನಗಳಲ್ಲಿ ಸಾಕಷ್ಟು ಅನುಕೂಲವಾಗಲಿದೆ’ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.
ತಾಲ್ಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ 125 ವಿಶೇಷ ಆಂದೋಲನದ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ತಾಲ್ಲೂಕಿನಲ್ಲಿ ಇಂದಿಗೂ ಸಾಕಷ್ಟು ದುರಸ್ತಿ ಫೈಲ್ಗಳ ಸಮಸ್ಯೆಯಿಂದ ರೈತರು ಪರದಾಡುತ್ತಿದ್ದಾರೆ. ಇದನ್ನು ಮನಗಂಡ ಸರ್ಕಾರ ವಿಶೇಷಕ ಆಂದೋಲನದ ಮೂಲಕ ಒಂದೇ ಭಾರಿಗೆ ದುರಸ್ತಿಪಡಿಸುವ 125 ಕಚೇರಿಗೆ ಚಾಲನೆ ನೀಡಲಾಗಿದೆ. ಅಧಿಕಾರಿಗಳು ಆದಷ್ಟು ಬೇಗ ರೈತರಿಗೆ ತಮ್ಮ ಜಮೀನಿನ ದುರಸ್ತಿಪಡಿಸಿ ದಾಖಲಾತಿ ಮಾಡಿಕೊಡುವ ಮೂಲಕ ಮದ್ಯವರ್ತಿಗಳಿಂದ ರೈತರನ್ನು ಕಾಪಾಡಬೇಕಿದೆ’ ಎಂದು ಹೇಳಿದರು.
ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ‘ಈ ಯೋಜನೆಯಲ್ಲಿ ಒಂದು ಗ್ರಾಮದ ಯಾವುದೇ ಸರ್ವೆ ನಂಬರ್ ತೆಗೆದುಕೊಂಡಲ್ಲಿ ಅದರಲ್ಲಿ ಬರುವ ಎಲ್ಲ ಜಮೀನುಗಳನ್ನು ಒಂದೇ ಬಾರಿಗೆ ದುರಸ್ತಿಪಡಿಸಲಾಗುತ್ತದೆ. ಪ್ರಾರಂಭವಾಗಿ ನೇರುಗಳಲೆ ಗ್ರಾಮ ಪಂಚಾಯಿತಿ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ’ ಎಂದರು.
ಈ ಸಂದರ್ಭ ಪ್ರಮುಖರಾದ ಕೆ.ಪಿ. ಚಂದ್ರಕಲಾ, ಕೆ.ಎಂ. ಲೋಕೇಶ್, ಬಿ.ಬಿ. ಸತೀಶ್, ಜನಾರ್ದನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.