ADVERTISEMENT

ಮಡಿಕೇರಿ | ಉಷ್ಣಾಂಶ ಏರಿಕೆ: ಬಸವಳಿದ ಶ್ವಾನಗಳು

ಕೆ.ಎಸ್.ಗಿರೀಶ್
Published 6 ಮಾರ್ಚ್ 2025, 7:30 IST
Last Updated 6 ಮಾರ್ಚ್ 2025, 7:30 IST
ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ಪಶು ವೈದ್ಯಕೀಯ ಪಾಲಿ ‌ಕ್ಲಿನಿಕ್‌ಗೆ ಸಾಕು ನಾಯಿಯೊಂದನ್ನು ಬುಧವಾರ ಚಿಕಿತ್ಸೆಗಾಗಿ ಕರೆ ತರಲಾಗಿತ್ತು
ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ಪಶು ವೈದ್ಯಕೀಯ ಪಾಲಿ ‌ಕ್ಲಿನಿಕ್‌ಗೆ ಸಾಕು ನಾಯಿಯೊಂದನ್ನು ಬುಧವಾರ ಚಿಕಿತ್ಸೆಗಾಗಿ ಕರೆ ತರಲಾಗಿತ್ತು   

ಮಡಿಕೇರಿ: ಕೊಡಗಿನಲ್ಲಿ ಫೆಬ್ರುವರಿ ತಿಂಗಳಿನಲ್ಲೇ ಉಷ್ಣಾಂಶ ಅಧಿಕವಾಗಿ 34 ಡಿಗ್ರಿ ಸೆಲ್ಸಿಯಸ್‌ ದಾಟಿತ್ತು. ಇದರಿಂದ ಸಾಕುಪ್ರಾಣಿಗಳಿಗೂ ಇನ್ನಿಲ್ಲದ ಬವಣೆಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅನಾರೋಗ್ಯ ಸಮಸ್ಯೆಗಳ ಕಾರಣಕ್ಕೆ ತಮ್ಮ ನಾಯಿಗಳೊಂದಿಗೆ ಇಲ್ಲಿನ ಕೊಡಗು ಜಿಲ್ಲಾ ಪಶುವೈದ್ಯಕೀಯ ಪಾಲಿಕ್ಲಿನಿಕ್‌ಗೆ ಭೇಟಿ ಕೊಡುವವರ ಸಂಖ್ಯೆ ಕಳೆದ 2 ವಾರಗಳಿಂದ ಈಚೆಗೆ ಹೆಚ್ಚಾಗಿದೆ.

‘ಸಾಮಾನ್ಯವಾಗಿ ತಂಪು ಹವೆಗೆ ಹೊಂದಿಕೊಂಡಿರುವ ನಾಯಿಗಳು ಅಸಾಮಾನ್ಯವಾಗಿ ಏರಿಕೆಯಾದ ಉಷ್ಣಾಂಶಕ್ಕೆ ಅಷ್ಟು ಬೇಗನೆ ಹೊಂದಿಕೊಳ್ಳುವುದಿಲ್ಲ’ ಎಂದು ಪಶು ವೈದ್ಯರು ಹೇಳುತ್ತಾರೆ. ‘ಮನುಷ್ಯರು ಫ್ಯಾನ್‌ ಹಾಕಿಕೊಂಡೋ, ತಂಪುಪಾನೀಯ ಸೇವಿಸುವ ಮೂಲಕವೋ ಅಥವಾ ಇನ್ನಾವುದೋ ವಿಧಾನದಿಂದ ಏರಿಕೆಯಾದ ಉಷ್ಣಾಂಶದ ವಾತಾವರಣಕ್ಕೆ ಹೊಂದಿಕೊಳ್ಳುತ್ತಾರೆ. ಆದರೆ,  ಇಂತಹ ಅವಕಾಶ ಇಲ್ಲದ ನಾಯಿಗಳು ಏರಿಕೆಯಾದ ಉಷ್ಣಾಂಶಕ್ಕೆ ಹೊಂದಿಕೊಳ್ಳಲಾಗದೆ ಒತ್ತಡವನ್ನು ಅನುಭವಿಸುತ್ತವೆ. ಇದು ಅನೇಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ’ ಎನ್ನುತ್ತಾರೆ.

ಈ ಕುರಿತು ‘ಪ್ರಜಾವಾಣಿ’ ಇಲ್ಲಿನ ಕೊಡಗು ಜಿಲ್ಲಾ ಪಶುವೈದ್ಯಕೀಯ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಕ್ಯಾಪ್ಟನ್ ತಿಮ್ಮಯ್ಯ ಅವರನ್ನು ಸಂಪರ್ಕಿಸಿದಾಗ ಅವರು, ‘ಕಳೆದ 2 ವಾರಗಳಿಂದ ಈಚೆಗೆ ‘ಕೆನೈನ್ ಪಾರ್ವೊ ವೈರಲ್ ಡಯೇರಿಯಾ’ ಸಮಸ್ಯೆಗೆ ತುತ್ತಾದ ನಾಯಿಗಳನ್ನು ಚಿಕಿತ್ಸೆಗಾಗಿ ಕರೆದುಕೊಂಡು ಬರುತ್ತಿರುವರ ಸಂಖ್ಯೆ ಹೆಚ್ಚಾಗಿದೆ. ಸದ್ಯ, ದಿನಕ್ಕೆ 5ರಿಂದ 10 ನಾಯಿಗಳಿಗೆ ಈ ಕಾಯಿಲೆಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಜ್ವರ ಬರುವುದು, ಊಟ ಮಾಡದಿರುವುದು, ಮಂಕಾಗಿರುವುದು ಈ ರೋಗ ಪ್ರಾಥಮಿಕ ಲಕ್ಷಣ. ಸಕಾಲದಲ್ಲಿ ಚಿಕಿತ್ಸೆ ಕೊಡಿಸದೇ ಹೋದರೆ ರಕ್ತವಾಂತಿ ಹಾಗೂ ರಕ್ತ ಭೇದಿಯಾಗಿ ನಾಯಿ ಗಂಭೀರ ಸ್ಥಿತಿಗೆ ತಲುಪುತ್ತದೆ. ಹಾಗಾಗಿ, ಸಕಾಲದಲ್ಲಿ ಚಿಕಿತ್ಸೆ ಕೊಡಿಸುವುದು ಮುಖ್ಯ ಎಂದು ಅವರು ಹೇಳುತ್ತಾರೆ.

ಈ ಕಾಯಿಲೆಗೆಂದೇ ವ್ಯಾಕ್ಸಿನ್‌ ಕೂಡ ಲಭ್ಯವಿದ್ದು, ಅದನ್ನು ಹಾಕಿಸುವುದರಿಂದ ಸಹಜವಾಗಿಯೇ ಶೇ 90ಕ್ಕೂ ಅಧಿಕ ರಕ್ಷಣೆಯನ್ನು ಪಡೆಯಬಹುದು. ಒಂದು ವೇಳೆ ಕಾಯಿಲೆ ಬಂದರೂ, ಬಹುಬೇಗನೇ ಅದು ವಾಸಿಯಾಗುತ್ತದೆ. ಹಾಗಾಗಿ, ಎಲ್ಲ ಸಾಕು ನಾಯಿಗಳಿಗೂ ವ್ಯಾಕ್ಸಿನ್ ಹಾಕಿಸಬೇಕು ಎಂದು ಅವರು ಮನವಿ ಮಾಡುತ್ತಾರೆ.

ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ಪಶು ವೈದ್ಯಕೀಯ ಪಾಲಿ ‌ಕ್ಲಿನಿಕ್‌ಗೆ ಸಾಕು ನಾಯಿಯೊಂದನ್ನು ಬುಧವಾರ ಉಪನಿರ್ದೇಶಕ ಡಾ.ಕ್ಯಾಪ್ಟನ್ ತಿಮ್ಮಯ್ಯ ಪರೀಕ್ಷಿಸಿದರು

 ಬೀದಿ ನಾಯಿಗಳ ಪಾಡಂತೂ ಹೇಳತೀರದಾಗಿದೆ. ಮಳೆಗಾಲದಲ್ಲಿ ಚಳಿಗಾಲದಲ್ಲಿ ಎಲ್ಲೆಂದರಲ್ಲಿ ಸುತ್ತು ಹಾಕುತ್ತಿದ್ದ ಬೀದಿ ನಾಯಿಗಳು ಬಿರು ಬೇಸಿಗೆಯ ದಿನಗಳಲ್ಲಿ ನೆರಳನ್ನು ಹುಡುಕುತ್ತಿವೆ. ನಿಲ್ಲಿಸಿದ ಕಾರುಗಳ ಕೆಳಗೆ ಮಲಗಿರುವ ನಾಯಿಗಳ ದೃಶ್ಯಗಳು ಸಾಮಾನ್ಯ ಎನಿಸಿವೆ. ಒಂದಿಷ್ಟು ನೀರು ಸಿಕ್ಕರೆ ಸಾಕು ಅದರ ಪಕ್ಕದಲ್ಲೇ ನಾಯಿಗಳು ಮಲಗುತ್ತಿವೆ.

ಹೆಚ್ಚು ನೀರು ಕುಡಿಸಬೇಕು: ಬೇಸಿಗೆ ಬಿಸಿಲು ಮಾತ್ರವಲ್ಲ ತಾಪಮಾನವೂ ಏರುಗತಿಯಲ್ಲಿರುವುದರಿಂದ ಈ ವೇಳೆ ಕೇವಲ ನಾಯಿಗಳಿಗೆ ಮಾತ್ರವಲ್ಲ ಎಲ್ಲ ಬಗೆಯ ಸಾಕು ಪ್ರಾಣಿಗಳಿಗೂ ಸಾಕಾಗುಷ್ಟು ಹೆಚ್ಚು ನೀರು ಕುಡಿಸಬೇಕು ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಲಿಂಗರಾಜ ದೊಡ್ಡಮನಿ ಅವರು ಸಲಹೆ ನೀಡುತ್ತಾರೆ.

ಉಷ್ಣಾಂಶ ಏರಿಕೆಯಾಗಿ ನೀರನ್ನು ಸರಿಯಾಗಿ ಕೊಡದೇ ಇರುವುದರಿಂದ ಒತ್ತಡ ಹೆಚ್ಚಾಗುತ್ತದೆ. ಕನಿಷ್ಠ ಎಂದರೂ ಸಾಕು ನಾಯಿಗಳಿಗೆ ದಿನಕ್ಕೆ 5 ಬಾರಿಯಾದರೂ ನೀರನ್ನು ಕುಡಿಸಲೇಬೇಕು.
ಲಿಂಗರಾಜ ದೊಡ್ಡಮನಿ ಪಶುಪಾಲನಾ ಇಲಾಖೆ ಉಪನಿರ್ದೇಶಕ.
ಕಾಯಿಲೆಯ ಲಕ್ಷಣಗಳು ಕಂಡು ಬಂದ ಕೂಡಲೇ ಚಿಕಿತ್ಸೆ ಕೊಡಿಸಬೇಕು. ನಾಯಿಗಳಿಗೆ ವ್ಯಾಕ್ಸಿನ್ ಹಾಕಿಸುವುದು ಉತ್ತಮ
ಡಾ.ಕ್ಯಾಪ್ಟನ್ ತಿಮ್ಮಯ್ಯ ಕೊಡಗು ಜಿಲ್ಲಾ ಪಶುವೈದ್ಯಕೀಯ ಪಾಲಿಕ್ಲಿನಿಕ್ ಉಪನಿರ್ದೇಶಕ.

ಉಷ್ಣಾಂಶ ಇನ್ನಷ್ಟು ಹೆಚ್ಚಳ; ಮುನ್ಸೂಚನೆ

ಮೈಸೂರಿನ ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗವು ಕೊಡಗು ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಇನ್ನಷ್ಟು ಉಷ್ಣಾಂಶ ಹೆಚ್ಚಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಮುಂದಿನ 5 ದಿನಗಳಲ್ಲಿ ಉಷ್ಣಾಂಶವು 34ರಿಂದ 35 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆ ಇದೆ. ಶಾಖದ ಒತ್ತಡವನ್ನು ಕಡಿಮೆ ಮಾಡಲು ಜಾನುವಾರುಗಳಿಗೆ ಸಾಕಾಗುಷ್ಟು ನೆರಳು ಮತ್ತು ಕುಡಿಯುವ ನೀರನ್ನು ಕೊಡಬೇಕು ಎಂದು ಎಂದು ವಿಭಾಗವು ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿದ ಉಷ್ಣಾಂಶದಿಂದ ರಕ್ಷಣೆಗೆ ಸಲಹೆಗಳು

ಮೈಸೂರಿನ ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗವು ಕೊಡಗಿನಲ್ಲಿ ಹೆಚ್ಚುತ್ತಿರುವ ಉಷ್ಣಾಂಶದಿಂದ ಸಾಕುಪ್ರಾಣಿಗಳನ್ನು ರಕ್ಷಿಸಲು ಕೆಲವೊಂದು ಸಲಹೆಗಳನ್ನು ನೀಡಿದೆ. ಜಾನುವಾರುಗಳ ಶೆಡ್‌ಗಳಲ್ಲಿ ಸರಿಯಾದ ನೆರಳು ಮತ್ತು ಗಾಳಿಯಾಡುವ ವ್ಯವಸ್ಥೆಯನ್ನು ಕಲ್ಪಿಸಬೇಕು. ಸಾಕಷ್ಟು ಪ್ರಮಾಣದಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು. ಬಿಸಿಲಿನಲ್ಲಿ ಹೆಚ್ಚು ಸಮಯ ಇರಿಸಬಾರದು ಎಂದು ಸಲಹೆ ನೀಡಲಾಗಿದೆ. ಕೋಳಿಗಳ ಮೇಲೂ ಹೆಚ್ಚಿನ ಉಷ್ಣಾಂಶ ಒತ್ತಡವನ್ನು ಉಂಟು ಮಾಡುತ್ತದೆ. ಇದು ಮೊಟ್ಟೆ ಉತ್ಪಾದನೆ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೋಳಿ ಸಾಕುವ ಶೆಡ್‌ಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಾಳಿ ಬರುವಂತಿರಬೇಕು. ಹೆಚ್ಚು ನೀರನ್ನು ಒದಗಿಸಬೇಕು ಎಂದು ವಿಭಾಗವು ತನ್ನ ಪ್ರಕಟಣೆಯಲ್ಲಿ ಸಲಹೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.