ಕುಶಾಲನಗರ: ಪಟ್ಟಣದಲ್ಲಿ ಸಂಚಾರಿ ನಿಯಮಗಳ ಫಲಕಗಳನ್ನು ಅಳವಡಿಸುವ ಮೂಲಕ ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಬೇಕು ಎಂದು ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿಯು ಡಿವೈಎಸ್ಪಿ ಚಂದ್ರಶೇಖರ್ ಅವರಿಗೆ ಗುರುವಾರ ಮನವಿ ಸಲ್ಲಿಸಿತು
ಇಲ್ಲಿನ ರಥ ಬೀದಿಯಲ್ಲಿ ಲಾರಿ ಸಂಚಾರದಿಂದ ಹಲವು ಬಾರಿ ಸಂಚಾರ ದಟ್ಟಣೆ ಆಗಿರುವುದರಿಂದ ಆ ರಸ್ತೆಯಲ್ಲಿ ಎಲ್ಲ ಮಾದರಿಯ ಲಾರಿ ಸಂಚಾರದಿಂದ ಮುಕ್ತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಮಿತಿ ಅಧ್ಯಕ್ಷ ಕೆ.ಎಸ್.ನಾಗೇಶ್ ನೇತೃತ್ವದಲ್ಲಿ ತೆರಳಿದ ತಂಡ ಸಂಚಾರ ನಿಯಮಗಳನ್ನು ತಿಳಿಸುವ ನಾಮಫಲಕವನ್ನು ಅವಶ್ಯವಿರುವ ಕಡೆಗಳಲ್ಲಿ ಅಳವಡಿಸಲು ಸಲಹೆ ನೀಡಿತು.
ಡಿವೈಎಸ್ಪಿ ಚಂದ್ರಶೇಖರ್ ಮನವಿ ಸ್ವೀಕರಿಸಿ ಮಾತನಾಡಿ, ‘ವರ್ತಕರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ನಾಮಫಲಕ ಅಳವಡಿಸಲು ನಮ್ಮದೇ ಆದ ನಿಯಮಗಳು ಇವೆ. ಅದರಂತೆ ಫಲಕಗಳನ್ನು ಮಾಡಿಸಲು ದಾನಿಗಳು ಮುಂದಾದರೆ ಖಂಡಿತಾ ಎಲ್ಲಾ ಕಡೆ ಸೂಚನಾ ಫಲಕಗಳನ್ನು ಹಾಕಿಸಲಾಗುವುದು’ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಕುಶಾಲನಗರ ಸ್ಥಾನೀಯ ಸಮಿತಿಯ ಉಪಾಧ್ಯಕ್ಷ ಎಂ.ಡಿ.ರಂಗಸ್ವಾಮಿ, ನಿಕಟಪೂರ್ವ ಅಧ್ಯಕ್ಷ ರವೀಂದ್ರ ರೈ, ಕಾರ್ಯದರ್ಶಿ ಚಿತ್ರ ರಮೇಶ್, ಖಜಾಂಚಿ ಎನ್.ವಿ.ಬಾಬು, ನಿರ್ದೇಶಕರಾದ ಕೆ.ಜೆ.ಸತೀಶ್, ಅಬ್ದುಲ್ ರಶೀದ್, ಬಿ.ಎನ್.ಅಂಜನ್, ಜನಾರ್ಧನ ಪ್ರಭು, ಕುಶಾಲನಗರ ಠಾಣಾಧಿಕಾರಿ ಗಣೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.