
ಸೋಮವಾರಪೇಟೆ: ‘ಮಕ್ಕಳಿಗೆ ಓದು ಬರಹದಲ್ಲಿ ನೂರಕ್ಕೆ ನೂರರಷ್ಟು ಅಂಕ ಪಡೆಯಬೇಕೆಂದು ಒತ್ತಾಯ ಮಾಡಿ ಮಕ್ಕಳನ್ನು ಹಿಂಸಿಸುವುದನ್ನು ಬಿಟ್ಟು, ಅವರಲ್ಲಿ ದೇಶಪ್ರೇಮ ಮೂಡಿಸುವ ಕೆಲಸವನ್ನು ಪೋಷಕರು ಮಾಡಬೇಕು‘ ಎಂದು ಬೆಂಗಳೂರಿನ ದೋ ಕೇಶವಮೂರ್ತಿ ತಿಳಿಸಿದರು.
ಅಬ್ಬೂರುಕಟ್ಟೆ ಮಂಡಲ ಹಿಂದೂ ಸಂಗಮ ಆಯೋಜನ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂ ಸೇವಕ ದಳದ ಹಿಂದೂ ಸಂಗಮ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಮಾತೆಯರು ವೀರ ಹನುಮಾನ್, ಪ್ರಭು ಶ್ರೀರಾಮಚಂದ್ರ ಅವರ ಚರಿತ್ರೆಯನ್ನು ತಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು. ದೇಶ ಕಂಡಂತ ನಿಜವಾದ ಬಿಗ್ ಬಾಸ್ ಭಗತ್ ಸಿಂಗ್, ಸುಖದೇವ್, ಆಜಾದ್ ಚಂದ್ರಶೇಖರ್. ಈ ದೇಶಕ್ಕಾಗಿ ಬಲಿದಾನ ನೀಡಿದ ಪ್ರತಿಯೊಬ್ಬರೂ ಮಾದರಿಯಾಗಿದ್ದಾರೆ. ಮಕ್ಕಳಲ್ಲಿ ದೇಶಭಕ್ತಿಯ ಅರಿವು ಮೂಡಿಸಿ, ಶಿಸ್ತಿನ ಸಿಪಾಯಿಗಳಂತೆ ಬೆಳೆಸಬೇಕು. ದೇಶಕ್ಕಾಗಿ ಹೋರಾಡಿದವರನ್ನು ಸ್ಮರಿಸಿ ಅವರ ಚಿಂತನೆಗಳನ್ನು ಮಕ್ಕಳಲ್ಲಿ ಬಿತ್ತಬೇಕು ಎಂದರು.
ಕಾರ್ಯಕ್ರದ ದಿವ್ಯ ಸಾನಿಧ್ಯ ವಹಿಸಿದ್ದ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಸಹಸ್ರಾರು ಋಷಿಮುನಿಗಳು, ಯೋಗಿಗಳು, ತ್ಯಾಗಿಗಳು ಹಾಗೂ ಸಂತರು ಭರತ ಭೂಮಿಯನ್ನು ಪುಣ್ಯಗೊಳಿಸಿ ಮನುಕುಲದ ಒಳಿತಿಗೆ ಸಾಕಷ್ಟು ಶ್ರಮಿಸಿದ್ದಾರೆ. ಹಿಂದೂ ಧರ್ಮದ ಉಜ್ವಲತೆಯನ್ನು ತೋರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದರು.
ಹಿಂದೂಗಳು ಒಗ್ಗಟ್ಟಿನಿಂದ ಇರಬೇಕು, ಇಲ್ಲದೆ ಹೋದಲ್ಲಿ ನಮ್ಮ ಹಿಂದಿನ ಇತಿಹಾಸ ಹೇಳುತ್ತದೆ ಏನೆಲ್ಲಾ ಅನಾಹುತಗಳಾಗಿವೆ ಎಂಬುದನ್ನು. ಈಗ ನಮ್ಮ ಸನಾತನ ಸಂಸ್ಕೃತಿ, ಹಿಂದೂ ಸಂಸ್ಕೃತಿ ಸೂರ್ಯನ ರೀತಿ ಬೆಳಗುತಿದೆ. ಇದಕ್ಕೆ ಪೂರಕವಾದಂತೆ ಉತ್ತರ ಪ್ರದೇಶದಲ್ಲಿ ನಡೆದ ಕುಂಭಮೇಳವೇ ಸಾಕ್ಷಿ. ಹಿಂದೂ ಧರ್ಮಕ್ಕೆ ಸಾವೇ ಇಲ್ಲ. ಇದು ಎಲ್ಲರೂ ತಿಳಿಯಬೇಕಾದ ವಿಷಯ ಎಂದು ನುಡಿದರು.
ತಣ್ಣೀರು ಹಳ್ಳ ಗ್ರಾಮದ ಬಸವೇಶ್ವರ ದೇವಾಲಯದಿಂದ ಅಬ್ಬೂರು ಕಟ್ಟೆ ಜಂಕ್ಷನ್ವರೆಗೂ ವಿವಿಧ ರೀತಿಯ ಟ್ಯಾಬ್ಲೋಗಳು, ಚಂಡೆ ವಾದ್ಯ, ಮಕ್ಕಳ ನೃತ್ಯದೊಂದಿಗೆ ಶೋಭಾಯಾತ್ರೆ ನಡೆಸಲಾಯಿತು. ವೇದಿಕೆಯಲ್ಲಿ ಹಿಂದೂ ಸಂಗಮ ಸಮಿತಿ ಅಧ್ಯಕ್ಷ ಪಿ.ಡಿ. ಪ್ರಕಾಶ್ ಪ್ರಮುಖರಾದ ಕೆ.ಎನ್. ಪಾಪಯ್ಯ, ಪಿ.ಇ. ಚಂದ್ರಾಜು ನೇರುಗಳಲೆ, ರೂಪ ಸತೀಶ್, ಕಾವೇರಿ ಹೊಸಳ್ಳಿ ಹಾಗೂ ಜೆ.ಜೆ. ರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.