ADVERTISEMENT

ಕೊಡಗಿನ ಸಂಸ್ಕೃತಿಗೆ ಐರಿ ಜನಾಂಗದ ಕೊಡುಗೆ ಅಪಾರ

ಅರಮೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮೇಲತ್ತಂಡ ರಮೇಶ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 19:45 IST
Last Updated 11 ಮಾರ್ಚ್ 2020, 19:45 IST
ವಿರಾಜಪೇಟೆಯ ಅರಮೇರಿಯಲ್ಲಿ ಐರಿ ಸಮಾಜದ ವಾರ್ಷಿಕ ಮಹಾಸಭೆ ಸಮಾಜದ ಅಧ್ಯಕ್ಷ ಮೇಲತ್ತಂಡ ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು
ವಿರಾಜಪೇಟೆಯ ಅರಮೇರಿಯಲ್ಲಿ ಐರಿ ಸಮಾಜದ ವಾರ್ಷಿಕ ಮಹಾಸಭೆ ಸಮಾಜದ ಅಧ್ಯಕ್ಷ ಮೇಲತ್ತಂಡ ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು   

ಮಡಿಕೇರಿ: ಕೊಡಗು ಜಿಲ್ಲೆಯ ಮೂಲ ನಿವಾಸಿಗಳ ಸಂಸ್ಕೃತಿ ಜಗತ್ತಿನಲ್ಲೇ ಅತಿವಿಶಿಷ್ಟವಾಗಿದ್ದು ಇದಕ್ಕೆ ಐರಿ ಜನಾಂಗದ ಕೊಡುಗೆ ಅಪಾರ ಎಂದು ಕೊಡಗು ಐರಿ ಸಮಾಜದ ಅಧ್ಯಕ್ಷ ಮೇಲತ್ತಂಡ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

ಅರಮೇರಿ ಸಮೀಪದ ಐರಿ ಸಮಾಜದ ಜಾಗದಲ್ಲಿ ನಡೆದ 2019-20ನೇ ಸಾಲಿನ ಕೊಡಗು ಐರಿ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡುಅವರು ಮಾತನಾಡಿದರು.

ಜನಾಂಗದ ಏಳಿಗೆಗಾಗಿ ಎಲ್ಲಾ ಐರಿ ಮನೆ ತನಗಳು ಒಗ್ಗಟ್ಟಿನಿಂದ ಶ್ರಮಿಸುವಂತೆ ಕರೆ ನೀಡಿದರು.

ADVERTISEMENT

ಅರಮೇರಿ ಬಳಿ ಖರೀದಿಸಲಾಗಿರುವ 1.50 ಎಕರೆ ಜಾಗದಲ್ಲಿ ಐರಿ ಸಮಾಜದ ಕಟ್ಟಡ ನಿರ್ಮಾಣ ಮಾಡಬೇಕಾಗಿದ್ದು ಇದಕ್ಕೆ ಸಮಾಜ ಬಾಂಧವರು ನೆರವು ನೀಡುವಂತೆ ಕೋರಿದರು.

ಕೊಡಗು ಐರಿ ಸಮಾಜದ ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ ಮಾತನಾಡಿ, ಕೊಡವ ಭಾಷಿಕರ ಒಡವೆ, ಆಯುಧಗಳು, ದೇವಸ್ಥಾನಗಳು ಮತ್ತು ಐನ್ ಮನೆಗಳು ಐರಿ ಜನಾಂಗದ ಕೊಡುಗೆಯಾಗಿದ್ದು ಇದನ್ನು ಗುರುತಿಸುವಂತಹ ಕೆಲಸವಾಗಬೇಕಿದೆ, ಈ ನಿಟ್ಟಿನಲ್ಲಿ ಐರಿ ಸಮಾಜ ಮುಂದಿನ ದಿನಗಳಲ್ಲಿ ರಚನಾತ್ಮಕವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು. ಸಮಾಜ ಬಾಂಧವರು ಐರಿ ಸಮಾಜದ ಸದಸ್ಯತ್ವ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.

ಸಭೆಯಲ್ಲಿ ಸಮಾಜ ಬಾಂಧವರ ಏಳಿಗೆ ನಿಟ್ಟಿನಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮೇಲತ್ತಂಡ ರಮೇಶ್ ನೇತೃತ್ವದ ಈಗಿರುವ ಆಡಳಿತ ಮಂಡಳಿಯನ್ನೇ ಮುಂದಿನ ಅವಧಿಗೂ ಮುಂದುವರಿಸಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ನಿವೃತ್ತ ಡಿವೈಎಸ್ಪಿ ತಟ್ಟಂಡ ಕುಶಾಲಪ್ಪ, ಉರಗ ತಜ್ಷ ಪೊನ್ನೀರ ಸ್ನೇಕ್ ಗಗನ್, ಹಿರಿಯ ಶಿಕ್ಷಕಿ ಮುಲ್ಲೈರೀರ ಹೇಮಾವತಿ ಹಾಗೂ ಪತ್ರಕರ್ತ ಐಮಂಡ ಗೋಪಾಲ್ ಸೋಮಯ್ಯ ಅವರನ್ನು ಕೊಡಗು ಐರಿ ಸಮಾಜದ ನೂತನ ನಿರ್ದೇಶಕರನ್ನಾಗಿಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸಾಧಕರಾದ ತಟ್ಟಂಡ ಹರೀಶ್ ತಮ್ಮಯ್ಯ ಹಾಗೂ ಕುಟ್ಟೈರೀರ ಸಾತ್ವಿಕ್ ಉತ್ತಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಕಾಮೆಯಂಡ ಗಣೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.